ದಾಬಸ್ ಪೇಟೆ: ಕೆಜಿ ಜಾಜೂರಿನಲ್ಲಿ ಕಲ್ಲು ಕ್ವಾರಿಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಸ್ಫೋಟ ನಡೆಸುವುದರಿಂದ ಗ್ರಾಮದ ಮನೆಗಳು ಬಿರುಕು ಬಿಟ್ಟಿವೆ ಎಂದು ಸಾರ್ವಜನಿಕರಿಂದ ದೂರಿದ್ದಾರೆ.
ನರಸೀಪುರ ಗ್ರಾಮ ಪಂಚಾಯಿತಿ ಅಧಿಕಾರಿ ಉಮಾಶಂಕರ್ ಹಾಗೂ ಪಂಚಾಯತಿ ಸದಸ್ಯರು ಈ ದೂರಿನ ಆಧಾರದಲ್ಲಿ ಕ್ರಷರ್ ಮೇಲೆ ದಾಳಿ ನಡೆಸಿದರು.
ಕ್ರಷರ್ ನಡೆಸಲು ಇಲಾಖೆಯಿಂದ ಅನುಮತಿ ಪಡೆದ ದಾಖಲೆ ನೀಡುವವರೆಗೆ ಸ್ಫೋಟ ಹಾಗೂ ಗಣಿಗಾರಿಕೆ ನಡೆಸದಂತೆ ಕ್ವಾರಿ ಮಾಲೀಕರಿಗೆ ಸೂಚನೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲೂಕು ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಜಿ ಜಾಜೂರು ಗ್ರಾಮದ ಸರ್ವೇ ನಂಬರ್ 22ರಲ್ಲಿ ಎಸ್ಎಲ್ಆರ್ ಸ್ಟೋನ್ ಕ್ರಷರ್ ಸಂಸ್ಥೆಯವರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಮತ್ತು ಸ್ಫೋಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ನರಸೀಪುರ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು.
'ಕಲ್ಲು ಸ್ಪೋಟ ನಡೆಸುತ್ತಿರುವುದರಿಂದ ಗ್ರಾಮದ ರೈತರಿಗೆ ಮತ್ತು ಮನೆಗಳಿಗೆ ಹಾನಿಯಾಗುತ್ತಿದೆ. ಇದರ ಬಗ್ಗೆ ಪಂಚಾಯಿತಿಗೆ ದೂರು ನೀಡಿದ್ದೇವೆ. ಕ್ರಷರ್ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಸ್ಥಳೀಯರಾದ ಸಂಪತ್ ಕುಮಾರ್ ಒತ್ತಾಯಿಸಿದರು.
‘ಸಾರ್ವಜನಿಕರ ದೂರಿನ ಆಧಾರದ ಮೇಲೆ ಕ್ರಷರ್ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ.ಕ್ರಷರ್ ನಡೆಸಲು ಪಡೆದ ಪರವಾನಗಿಯನ್ನು ಮಾಲೀಕರು ಹಾಜರು ಪಡಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪಿಡಿಒ ಉಮಾಶಂಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.