ಬೆಂಗಳೂರು: ಅಕ್ರಮ ವಾಸ ಪ್ರಕರಣದಲ್ಲಿ 301 ದಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಫಲಶ್ ಅಧಿಕಾರಿ ಹಾಗೂ ಶುಕ್ಲಾ ದಂಪತಿಗೆ ಜಾಮೀನು ಮಂಜೂರಾಗಿದ್ದು, ಅವರಿಬ್ಬರು ಗುರುವಾರ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.
‘ಪಶ್ಚಿಮ ಬಂಗಾಳದ ಫಲಶ್ ಅಧಿಕಾರಿ ಹಾಗೂ ಶುಕ್ಲಾ ದಂಪತಿ, ಕೆಲಸ ಹುಡುಕಿಕೊಂಡು 2022ರ ಜುಲೈನಲ್ಲಿ ಬೆಂಗಳೂರಿಗೆ ಬಂದಿದ್ದರು. ಮಾರತ್ತಹಳ್ಳಿಯಲ್ಲಿ ವಾಸವಿದ್ದರು. ‘ಅಕ್ರಮವಾಗಿ ವಾಸವಿರುವ ಬಾಂಗ್ಲಾ ಪ್ರಜೆಗಳು’ ಎಂಬ ಆರೋಪ ಹೊರಿಸಿ ದಂಪತಿಯನ್ನು ಪೊಲೀಸರು ಬಂಧಿಸಿದ್ದರು. ನಂತರ, ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಅಂದಿನಿಂದ 301 ದಿನ ದಂಪತಿ ಜೈಲಿನಲ್ಲಿದ್ದರು’ ಎಂದು ವೈಟ್ಫೀಲ್ಡ್ ವಿಭಾಗದ ಮೂಲಗಳು ಹೇಳಿವೆ.
‘ನಾವು ಬಾಂಗ್ಲಾ ಪ್ರಜೆಗಳಲ್ಲ. ನಮ್ಮೂರು ಪಶ್ಚಿಮ ಬಂಗಾಳವೆಂದು ದಂಪತಿ ಹೇಳಿದ್ದರು. ಆದರೆ, ಅವರ ಹೇಳಿಕೆಯನ್ನು ಪೊಲೀಸರು ಪರಿಗಣಿಸಿರಲಿಲ್ಲ. ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಇದರ ನಡುವೆಯೇ ಪೊಲೀಸರು, ಪಶ್ಚಿಮ ಬಂಗಾಳದ ಅಧಿಕಾರಿಗಳನ್ನು ಸಂಪರ್ಕಿಸಿ ದಂಪತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ದಾಖಲೆಗಳ ಸಮೇತ ದಂಪತಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಏಪ್ರಿಲ್ 28ರಂದು ಜಾಮೀನು ಮಂಜೂರು ಮಾಡಿತ್ತು. ಸ್ಥಳೀಯರ ಸಹಿ ಇಲ್ಲದ ಕಾರಣ ಜೈಲಿನಿಂದ ಬಿಡುಗಡೆ ಸಾಧ್ಯವಾಗಿರಲಿಲ್ಲ. ಇದೀಗ, ಎಲ್ಲ ಪ್ರಕ್ರಿಯೆ ಮುಗಿದಿದೆ. ದಂಪತಿ ಗುರುವಾರ ತಮ್ಮೂರಿಗೆ ಹೋಗಿದ್ದಾರೆ’ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.