ಬೆಂಗಳೂರು: ‘ಹವಾಮಾನ ಬದಲಾವಣೆಯಿಂದ ನಗರದಲ್ಲಿ ಡೆಂಗಿ, ಚಿಕೂನ್ಗುನ್ಯ, ಕೋವಿಡ್,ಫ್ಲೂ ಜ್ವರದ (ಇನ್ಫ್ಲುಯೆಂಝಾ) ಜತೆಗೆ ವೈರಾಣು ಸೋಂಕು ಕಾಣಿಸಿಕೊಳ್ಳುತ್ತಿದೆ. ಆಸ್ಪತ್ರೆ ದಾಖಲಾತಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಶೇ 15 ರಷ್ಟು ಹೆಚ್ಚಳವಾಗಿದೆ’ ಎಂದುನಾರಾಯಣ ಹೆಲ್ತ್ ಸಿಟಿಯ ಆಂತರಿಕ ಔಷಧ ವಿಭಾಗದ ಸಲಹೆಗಾರ ಡಾ. ಮಹೇಶ್ ಕುಮಾರ್ ತಿಳಿಸಿದ್ದಾರೆ.
‘ವಾತಾವರಣದಲ್ಲಿನ ಬದಲಾವಣೆಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಮಧ್ಯಂತರ ಮಳೆಯು ಡೆಂಗಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಪ್ರತಿನಿತ್ಯ ಸರಾಸರಿ 3ರಿಂದ 4 ಅತಿಸಾರ, 5ರಿಂದ 6 ಟೈಫಾಯಿಡ್, 4ರಿಂದ 5 ಕೋವಿಡ್ ಹಾಗೂ 4ರಿಂದ 6 ಕಾಲರಾ ಪ್ರಕರಣಗಳು ಆಸ್ಪತ್ರೆಯಲ್ಲಿ ದೃಢಪಡುತ್ತಿವೆ. ಹೊರರೋಗಿ ವಿಭಾಗದಲ್ಲಿ ಪ್ರತಿದಿನ 25ರಿಂದ 30 ಡೆಂಗಿ ರೋಗಿಗಳನ್ನು ನೋಡುತ್ತಿದ್ದೇವೆ. ಅವರಲ್ಲಿ 5ರಿಂದ 6 ಮಂದಿ ತೀವ್ರತರ ಅಸ್ವಸ್ಥರಾಗಿರುತ್ತಾರೆ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು’ ಎಂದು ಹೇಳಿದ್ದಾರೆ.
‘ಕೆಲ ದಿನಗಳಿಂದ ಮಳೆಯಾಗುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಬಹುದು. ಜ್ವರ, ಮೈ–ಕೈ ನೋವು ಮತ್ತು ಕೀಲು ನೋವು, ತೀವ್ರತರ ತಲೆನೋವು ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಹತ್ತಿರ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.