ಬೆಂಗಳೂರು: ‘ಕಲಿಕೆಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾವಂತರನ್ನು ಸನ್ಮಾನಿಸುವುದರಿಂದ ಮಕ್ಕಳನ್ನು ಶಿಕ್ಷಣಕ್ಕೆ ಉತ್ತೇಜಿಸಿದಂತಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.
ಬಿಬಿಎಂಪಿ ನೌಕರರ ಸಹಕಾರ ಸಂಘದ 110ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಕಗಳಿಸಿದರೆ ಮಾತ್ರ ಬುದ್ದಿವಂತರಲ್ಲ, ಸಮಾಜದಲ್ಲಿ ಹೇಗೆ ಬದುಕುಬೇಕು ಎಂಬ ಕಲೆ ತಿಳಿದಿರಬೇಕು. ಮಕ್ಕಳನ್ನು ಸನ್ಮಾನಿಸುವುದರಿಂದ ಅವರ ಮೇಲೆ ಜವಾಬ್ದಾರಿ ಹೆಚ್ಚುತ್ತದೆ. ಜ್ಞಾನವಂತರಾಗಿ, ಉತ್ತಮ ಪ್ರಜೆಯಾಗಿ ಒಳ್ಳೆಯ ಸಮಾಜ ನಿರ್ಮಾಣ ಮಾಡಿರಿ’ ಎಂದು ಹೇಳಿದರು.
‘ದೇಶದಲ್ಲಿ ಶೇಕಡ 50ರಷ್ಟು ಮಹಿಳೆಯರು ಇದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಸಮಾನತೆ, ರಾಜಕೀಯ ನ್ಯಾಯ ಮಹಿಳೆಯರಿಗೆ ಕೊಡಬೇಕು. ಬಸವೇಶ್ವರರು, ಕುವೆಂಪುರವರು ಮಹಿಳೆಯರ ಸಮಾನತೆ, ಸಾಮಾಜಿಕ ನ್ಯಾಯದ ಪರ ಮಾತನಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರರೂ ಬಡವರು, ಬಡವರಾಗಿಯೇ ಇದ್ದಾರೆ’ ಎಂದರು.
‘ಪೌರ ಕಾರ್ಮಿಕರು ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರ ಮಕ್ಕಳ ಶಿಕ್ಷಣ ಮತ್ತು ಪೌರ ಕಾರ್ಮಿಕರ ಆರೋಗ್ಯ, ವಸತಿ ಸೌಕರ್ಯ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದರು.
ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, ‘ಇಂದಿನ ಪೀಳಿಗೆಯವರು ಕನ್ನಡ ಕಲಿಯಬೇಕು, ಮಾತನಾಡಬೇಕು, ಭಾಷೆಯನ್ನು ಉಳಿಸಬೇಕು’ ಎಂದರು.
ಸಂಘದ ಅಧ್ಯಕ್ಷ ಎ.ಅಮೃತ್ರಾಜ್ ಮಾತನಾಡಿ, ‘ಸಹಕಾರ ಸಂಘದಲ್ಲಿ ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಎಂಬಿಎ ಮತ್ತು ಬಿಇ, ಪದವಿ ಹಾಗೂ ಎಸ್ಎಸ್ಎಲ್ಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು’ ಎಂದರು.
ಸಂಘದ ಉಪಾಧ್ಯಕ್ಷ ಕೆ.ಜಿ.ರವಿ, ಹಿನ್ನಲೆ ಗಾಯಕಿ ಅನುರಾಧಾ ಭಟ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.