
ಬೆಂಗಳೂರು: ಇಂಡಿಗೊ ವಿಮಾನಗಳ ಸಂಚಾರದಲ್ಲಿನ ವ್ಯತ್ಯಯದಿಂದ ಪ್ರಯಾಣಿಕರಿಗೆ ತೊಂದರೆ ಆಗಿರುವುದು ಅಷ್ಟೇ ಅಲ್ಲದೆ, ವಾಸ್ತವ್ಯಕ್ಕೆ ಹೋಟೆಲ್ಗಳು ದುಬಾರಿ ಹಣ ನಿಗದಿ ಮಾಡಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ. ಕೆಲವು ಹೋಟೆಲ್, ಲಾಡ್ಜ್ಗಳಲ್ಲಿ ಸಾಮಾನ್ಯಕ್ಕಿಂತ ಮೂರು ಪಟ್ಟು ದರ ಹೆಚ್ಚಿಸಿರುವ ಆರೋಪ ಕೇಳಿ ಬಂದಿದೆ.
6–7 ದಿನದಿಂದ ಇಂಡಿಗೊ ವಿಮಾನ ಸಂಚಾರ ರದ್ದುಪಡಿಸಿದ್ದರಿಂದ ಬೆಂಗಳೂರಿನಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ರಾತ್ರಿ ವೇಳೆ ಪ್ರಯಾಣ ಮಾಡಬೇಕಾಗಿದ್ದವರು ಪರ್ಯಾಯ ವಿಮಾನ ಸಂಚಾರಕ್ಕೆ ಅವಕಾಶವೂ ಇಲ್ಲದ ಕಾರಣ ವಾಸ್ತವ್ಯಕ್ಕೆ ಮುಂದಾದರು.
ಈ ವೇಳೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹೋಟೆಲ್ಗಳಲ್ಲಿ ದರ ವಿಚಾರಿಸಿದಾಗ ಮೂರು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ.
ಸಾಮಾನ್ಯ ದಿನಗಳಲ್ಲಿ ₹3,938ಕ್ಕೆ ಲಭ್ಯವಿರುವ ಕೊಠಡಿ ದರ ₹11,000ಕ್ಕೆ ಏರಿಕೆಯಾಗಿತ್ತು. ಮತ್ತೊಂದು ಹೋಟೆಲ್ನಲ್ಲಿ ₹3,000 ಇದ್ದ ದರವನ್ನು ಈಗ ₹10,000ಕ್ಕೆ ಹೆಚ್ಚಿಸಲಾಗಿದೆ. ಕೆಲವು ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ದರ ಪಾವತಿಸಿ ಕೊಠಡಿ ಪಡೆದಿದ್ದಾರೆ.
‘ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಹೊರಟಿದ್ದೆ. ಆದರೆ, ವಿಮಾನ ಸಂಚಾರ ರದ್ದಾದ ಕಾರಣ ಇಲ್ಲಿಯೇ ಉಳಿಯಲು ಕೊಠಡಿ ವಿಚಾರಿಸಿದರೆ ₹7,000ದಿಂದ ₹10,000 ಆಗಬಹುದು ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದರು. ಕೊನೆಗೆ ಬೆಂಗಳೂರಿಗೆ ವಾಪಸಾಗಲು ಕ್ಯಾಬ್ ಬುಕ್ ಮಾಡಿದರೆ ₹2,500 ಪಾವತಿಸಬೇಕಾಯಿತು. ನಮ್ಮದಲ್ಲದ ತಪ್ಪಿಗೆ ಹೊರೆ ಅನುಭವಿಸಿದ್ದೇವೆ. ಈ ವೆಚ್ಚವನ್ನು ಇಂಡಿಗೊ ವಿಮಾನಯಾನ ಸಂಸ್ಥೆಯವರು ಭರಿಸಬೇಕು’ ಎಂದು ಸಾಫ್ಟ್ವೇರ್ ಎಂಜಿನಿಯರ್ ಪ್ರೀತಿ ಒತ್ತಾಯಿಸಿದರು.
‘ಬೆಂಗಳೂರು ವಿಶ್ವ ದರ್ಜೆಯ ನಗರ. ವಿಮಾನಯಾನ ಇಲ್ಲವೇ ಸಾರಿಗೆ ಸಮಸ್ಯೆಯಾದರೆ ಹೋಟೆಲ್ಗಳಲ್ಲಿ ಕೊಠಡಿಗಳ ದರ ಏರಿಕೆ ಮಾಡಲಾಗುತ್ತದೆ. ಇದೊಂದು ರೀತಿಯ ಹಗಲು ದರೋಡೆ ’ ಎಂದು ರಾಜಸ್ಥಾನದ ಜೈಸಲ್ಮೇರ್ಗೆ ಹೋಗಬೇಕಿದ್ದ ಉದ್ಯಮಿ ಸೆಂಥಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಕ್ರಿಸ್ಮಸ್ ಹಾಗೂ ಹೊಸ ವರ್ಷದ ರಜೆ ವೇಳೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ಗಳ ಪ್ರಯಾಣ ದರದ ಬಿಸಿ ತಟ್ಟಿದೆ.
ಈ ವಾರದಲ್ಲಿ ಸಂಚರಿಸುವವರು ಸಾಮಾನ್ಯಕ್ಕಿಂತ ₹200ರಿಂದ ₹300 ಹೆಚ್ಚಿಗೆ ಪಾವತಿಸಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಡಿಸೆಂಬರ್ 20ರ ನಂತರ ದರವು ₹2000 ದಿಂದ ₹3000ಕ್ಕೆ ಏರಿಕೆಯಾಗಬಹುದು ಎನ್ನುವ ಆತಂಕ ಎದುರಾಗಿದೆ.
ಕೇರಳದ ಹಲವು ನಗರಗಳು, ಮುಂಬೈ, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಿಗೆ ಸಂಚರಿಸಲು ಪ್ರಯಾಣ ದರ ದುಬಾರಿಯಾಗಲಿದೆ.
‘ಈಗಾಗಲೇ ರೈಲುಗಳಲ್ಲಿ ಟಿಕೆಟ್ ಬುಕ್ಕಿಂಗ್ ಆಗಿದೆ. ವಿಮಾನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿರುವುದರಿಂದ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅನಿವಾರ್ಯವಾಗಿ ದರ ಏರಿಕೆ ಮಾಡಿದ್ದೇವೆ’ ಎಂದು ಖಾಸಗಿ ಬಸ್ ವ್ಯವಸ್ಥಾಪಕರೊಬ್ಬರು ತಿಳಿಸಿದರು.
‘ಬೇಡಿಕೆ ಇರುವ ಜತೆಗೆ ವಿಮಾನ ಸಂಚಾರ ರದ್ದು ಸನ್ನಿವೇಶ ಎದುರಾದಾಗ ಸರ್ಕಾರ ಮಧ್ಯ ಪ್ರವೇಶಿಸಿ ದರಕ್ಕೆ ಮಿತಿ ಹಾಕಬೇಕು. ಹೆಚ್ಚು ದರ ವಸೂಲಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರಲ್ಲಿ ನೆಲಸಿರುವ ಕೇರಳದ ಕೆ. ಶ್ರೀಜಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.