ADVERTISEMENT

ಊಟದಲ್ಲಿ ಹುಳು ಪತ್ತೆ: ‘ದಿ ರಾಮೇಶ್ವರ ಕೆಫೆ’ ಮಾಲೀಕರು,ವ್ಯವಸ್ಥಾಪಕರ ವಿರುದ್ಧ FIR

ಊಟದಲ್ಲಿ ಹುಳು ಪತ್ತೆಯಾಗಿದ್ದ ಪ್ರಕರಣ, ಕಳೆದ ಜುಲೈನಲ್ಲಿ ನಡೆದಿದ್ದ ಘಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
ದಿ ರಾಮೇಶ್ವರಂ ಕೆಫೆ
ದಿ ರಾಮೇಶ್ವರಂ ಕೆಫೆ   

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–1ರಲ್ಲಿರುವ ‘ದಿ ರಾಮೇಶ್ವರ ಕೆಫೆ’ಯಲ್ಲಿ ನೀಡಲಾದ ಊಟದಲ್ಲಿ ಹುಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಗ್ರಾಹಕರೊಬ್ಬರಿಗೆ ಕಿರುಕುಳ ನೀಡಿ ಮಾನಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಫೆ ಮಾಲೀಕರು ಹಾಗೂ ವ್ಯವಸ್ಥಾಪಕರ ವಿರುದ್ಧ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ (ಬಿಐಎಎಲ್‌) ಎಫ್‌ಐಆರ್ ದಾಖಲಾಗಿದೆ.  

ಮಾರತ್‌ಹಳ್ಳಿ ನಿವಾಸಿ ಎನ್‌.ನಿಖಿಲ್ ಅವರು ನೀಡಿದ ದೂರು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್‌ಗಳಾದ 61, 123, 217, 228, 229, 274, ಹಾಗೂ 275ರ ಅಡಿ ಕೆಫೆ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್‌, ರಾಘವೇಂದ್ರ ರಾವ್‌ ಹಾಗೂ ವ್ಯವಸ್ಥಾಪಕ ಬಿ.ಎಲ್‌.ಸುಮಂತ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಘಟನೆಯು ಕಳೆದ ಜುಲೈ 24ರಂದು ನಡೆದಿದ್ದು, ದೂರುದಾರರು ಬೇರೆ ಪ್ರದೇಶಕ್ಕೆ ತೆರಳಿದ್ದರು. ನಂತರ, ತಮ್ಮ ಮೇಲೆ ದಾಖಲಾದ ದೂರಿನ ಬಗ್ಗೆ ತಿಳಿದುಕೊಂಡು ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಆ ದೂರಿನ ಮೇರೆಗೆ ನ.29ರಂದು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಎಫ್‌ಐಆರ್‌ನಲ್ಲಿ ಏನಿದೆ?:

‘ಎನ್‌.ನಿಖಿಲ್‌ ಅವರು ಜುಲೈ 24ರಂದು ಬೆಳಿಗ್ಗೆ 7.42ರ ಸುಮಾರಿಗೆ ತಮ್ಮ ಸ್ನೇಹಿತರ ಜತೆಗೆ ಗುವಾಹಟಿಗೆ ಪ್ರಯಾಣಿಸಲು ಕೆಐಎಎಲ್‌ ವಿಮಾನ ನಿಲ್ದಾಣ ಟರ್ಮಿನಲ್‌–1ಕ್ಕೆ ಬಂದಿದ್ದರು. ಉಪಾಹಾರಕ್ಕಾಗಿ ರಾಮೇಶ್ವರ ಕೆಫೆಗೆ ತೆರಳಿ, ಪೊಂಗಲ್‌ ಹಾಗೂ ಫಿಲ್ಟರ್‌ ಕಾಫಿ (ಬಿಲ್‌ ಸಂಖ್ಯೆ 139689, ಟೋಕನ್‌ 686) ಆರ್ಡರ್ ಮಾಡಿದ್ದರು. ಆಹಾರದಲ್ಲಿ ಕೀಟ (ಸೂಪರ್‌ ವರ್ಮ್‌) ಪತ್ತೆಯಾಗಿದ್ದು, ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದರು. ಅಲ್ಲಿದ್ದ ಸಿಬ್ಬಂದಿ ಆಹಾರ ಬದಲಾವಣೆ ಮಾಡಿಕೊಡುವುದಾಗಿ ಹೇಳಿದ್ದರು. ಅದೇ ವೇಳೆ ಕೆಫೆಗೆ ಬಂದಿದ್ದ ಗ್ರಾಹಕರು, ಘಟನೆಯ ವಿಡಿಯೊ ಹಾಗೂ ಫೋಟೊ ತೆಗೆದುಕೊಂಡಿದ್ದರು. ನಂತರ, ದೂರುದಾರ ನಿಖಿಲ್‌ ಅವರು ಗಲಾಟೆ ಮಾಡದೇ ವಿಮಾನದಲ್ಲಿ ಪ್ರಯಾಣಿಸಲು ತೆರಳಿದ್ದರು’ ಎಂದು ಎಫ್‌ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ:

‘₹25 ಲಕ್ಷಕ್ಕೆ ಬೇಡಿಕೆಯಿಟ್ಟು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆಫೆಯ ಪ್ರತಿನಿಧಿ ಬಿ.ಎಲ್‌.ಸುಮಂತ್‌ ಅವರು ತಮ್ಮ ವಿರುದ್ಧ ನೀಡಿದ್ದ ದೂರಿನ ಬಗ್ಗೆ ಜುಲೈ 27ರಂದು ಮಾಧ್ಯಮಗಳ ವರದಿಯಿಂದ ತಿಳಿದುಕೊಂಡಿದ್ದೆ. ಘಟನೆ ನಡೆದ ದಿನದಂದು ಬೆಳಿಗ್ಗೆ 10.27ರ ಸುಮಾರಿಗೆ ವಿಮಾನದಲ್ಲಿಯೇ ಇದ್ದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ದೂರಿನಲ್ಲಿ ಉಲ್ಲೇಖಿಸಿರುವ ಫೋನ್‌ ಸಂಖ್ಯೆಗಳೊಂದಿಗೂ ತನಗೂ ಯಾವುದೇ ಸಂಪರ್ಕ ಇಲ್ಲ. ತಾನು ಯಾವುದೇ ಪರಿಹಾರ, ಮರುಪಾವತಿ ಅಥವಾ ಹಣಕಾಸಿನ ಬೇಡಿಕೆ ಮಾಡಿರುವುದಿಲ್ಲ’ ಎಂದು ಉಲ್ಲೇಖಿಸಲಾಗಿದೆ.

‘ಘಟನೆ ನಡೆದ ದಿನದಂದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ, ತನ್ನ ಬೋರ್ಡಿಂಗ್‌ ಪಾಸ್, ವಿಮಾನ ಪ್ರಯಾಣದ ದಾಖಲೆಗಳು ಹಾಗೂ ಸಂಬಂಧಿಸಿದ ಕರೆಗಳ ವಿವರಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕು. ಅಂದು ಕಳಪೆ ಆಹಾರ ನೀಡಿ ನನ್ನ ಜೀವಕ್ಕೆ ಅಪಾಯ ಉಂಟು ಮಾಡಲು ಪ್ರಯತ್ನಿಸಲಾಗಿತ್ತು. ಕೆಫೆಯ ಮಾಲೀಕರಾದ ರಾಘವೇಂದ್ರ ರಾವ್‌, ದಿವ್ಯಾ ರಾಘವೇಂದ್ರ ರಾವ್‌ ಹಾಗೂ ಬಿ.ಎಲ್‌.ಸುಮಂತ್‌ ಅವರು ಸುಳ್ಳು ಆರೋಪ ಹೊರಿಸಿ ಮಾನಹಾನಿ ಮಾಡಿದ್ದಾರೆ. ನನಗೆ ಕಿರುಕುಳ ನೀಡಿದ್ದಾರೆ. ತನ್ನ ವೈಯಕ್ತಿಕ ಗೌರವ ಹಾಗೂ ಪ್ರತಿಷ್ಠೆಗೆ ಹಾನಿ ಮಾಡಿದ್ದಾರೆ’ ಎಂದು ನಿಖಿಲ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವರ್ಗಾವಣೆ ಸಾಧ್ಯತೆ
ಸುಮಂತ್‌ ಅವರು ವೈಯಾಲಿಕಾವಲ್‌ ಠಾಣೆಗೆ ಈ ಹಿಂದೆ ದೂರು ನೀಡಿದ್ದರು. ಆ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು. ಈ ಎಫ್‌ಐಆರ್ ಸಹ ಅದೇ ಠಾಣೆಗೆ ವರ್ಗಾವಣೆ ಮಾಡಲಾಗುವುದು. ವೈಯಾಲಿಕಾವಲ್ ಠಾಣೆಯ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.