ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಮಣಿಪುರದ 100 ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲು ಬೆಂಗಳೂರಿನ ‘ಇನ್ಸೈಟ್ಸ್ ಐಎಎಸ್’ ಅಕಾಡೆಮಿ ಮುಂದಾಗಿದೆ.
‘ಸಮುದಾಯ ಕಾರ್ಯಕ್ರಮದ ಅಡಿ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಅಭ್ಯರ್ಥಿಗಳು ಮಣಿಪುರದ ನಿವಾಸಿಗಳಾಗಿರಬೇಕು. ಆಯ್ಕೆಯಾದವರಿಗೆ ಬೆಂಗಳೂರು, ದೆಹಲಿ, ಲಖನೌ, ಧಾರವಾಡ, ಬೆಳ್ಳೂಡಿ, ಮೈಸೂರು, ಹೈದರಾಬಾದ್ನ ಇನ್ಸೈಟ್ಸ್ ಸಂಸ್ಥೆಯ ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು. ಆನ್ಲೈನ್ ಅಥವಾ ಆಫ್ಲೈನ್ ಎರಡು ವಿಧಾನಗಳ ಮೂಲಕವೂ ತರಬೇತಿ ಪಡೆದುಕೊಳ್ಳಬಹುದು. ಮಣಿಪುರದ ಅಭ್ಯರ್ಥಿಗಳಿಗೆ ತರಬೇತಿಯು ಸಂಪೂರ್ಣ ಉಚಿತವಾಗಿರಲಿದೆ’ ಎಂದು ಇನ್ಸೈಟ್ಸ್ ಐಎಎಸ್ ನಿರ್ದೇಶಕ ಜಿ.ಬಿ. ವಿನಯ್ಕುಮಾರ್ ಮಾಹಿತಿ ನೀಡಿದರು.
‘ಒಂದೇ ದಿನದಲ್ಲಿ 300 ಅರ್ಜಿಗಳು ಬಂದಿವೆ. ಕೆಲವು ಮಾನದಂಡ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಗಸ್ಟ್ ಮೊದಲ ವಾರದಿಂದ ತರಬೇತಿ ಆರಂಭಿಸಲಾಗುವುದು’ ಎಂದು ತಿಳಿಸಿದರು.
‘ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಶೈಕ್ಷಣಿಕ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಮಕ್ಕಳ ಶೈಕ್ಷಣಿಕ ಬದುಕಿಗೆ ಹಿಂಸಾಚಾರವು ಹಿನ್ನಡೆ ಉಂಟು ಮಾಡುತ್ತಿದೆ. ದೇಶದ ಇತರೆ ಭಾಗದವರು ಮಣಿಪುರದ ನಿವಾಸಿಗಳನ್ನು ದೂರ ಮಾಡಿದ್ದಾರೆ ಎನ್ನುವ ಭಾವನೆ ಮೂಡಿದೆ. ಈ ಭಾವನೆ ದೂರ ಮಾಡಿ ಅವರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಲು ಇನ್ಸೈಟ್ಸ್ ಐಎಎಸ್ ಕಾರ್ಯಕ್ರಮ ರೂಪಿಸಿದೆ. ಕಳೆದ ವರ್ಷ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಎಸ್ಸಿ ಹಾಗೂ ಎಸ್ಟಿ ಸಮುದಾಯದ 100 ಮಂದಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲಾಗಿತ್ತು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.