ADVERTISEMENT

‘ವಿಜ್ಞಾನದ ಮೂಲಕ ಸಮಾಜವನ್ನು ಪ್ರೇರೇಪಿಸಬೇಕು’

ಐಐಎಸ್‌ಸಿ ಘಟಿಕೋತ್ಸವ: 856 ವಿದ್ಯಾರ್ಥಿಗಳಿಗೆ ಪದವಿ, 50 ಮಂದಿಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 10:35 IST
Last Updated 25 ಜೂನ್ 2018, 10:35 IST
   

ಬೆಂಗಳೂರು: ‘ವಿಜ್ಞಾನವನ್ನು ಬಳಸಿಕೊಂಡು ಶಿಕ್ಷಣ ವ್ಯವಸ್ಥೆಯ ಮೂಲಕ ಸಮಾಜವನ್ನು ಪ್ರೇರೇಪಿಸುವ ಕೆಲಸ ಮಾಡಬೇಕು. ಜನಸಾಮಾನ್ಯರನ್ನೂ ವಿಜ್ಞಾನ ತಲುಪಬೇಕು’ ಎಂದು ಬಯೋಕಾನ್‌ ಲಿಮಿಟೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್‌ ಮಜುಂದಾರ್‌ ಷಾ ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಅವರು 856 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಇದರಲ್ಲಿ 50 ವಿದ್ಯಾರ್ಥಿಗಳು ಚಿನ್ನದ ಪದಕದ ಸಾಧನೆ ಮಾಡಿದ್ದಾರೆ.

‘ಶಿಕ್ಷಣ ವ್ಯವಸ್ಥೆ ಜನಸಾಮಾನ್ಯರನ್ನೂ ಪ್ರೇರೇಪಿಸಬೇಕು. ವಿಜ್ಞಾನವನ್ನು ಎಲ್ಲರಿಗೂ ತಲುಪುವಂತೆ ಮಾಡಬೇಕಾದದು ಶಿಕ್ಷಣ ಸಂಸ್ಥೆಗಳ ಕರ್ತವ್ಯ ಆಗಬೇಕು. ಜಾಗತಿಕ ತಾಪಮಾನ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಇವುಗಳನ್ನು ಶಿಕ್ಷಿತ ವರ್ಗ ಎಲ್ಲರಿಗೂ ತಲುಪುವಂತೆ ಮಾಡಬೇಕು. ಜನಸಾಮಾನ್ಯರೂ ಜವಾಬ್ದಾರಿಯುತ ನಾಗರೀಕರಾಗುವಂತೆ ಮಾಡುವ ವ್ಯವಸ್ಥೆ ಹುಟ್ಟಿಕೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ವಿನ್ಯಾಸಕಾರನಾಗುವ ಗುರಿ: ‘ನನಗೆ ಈಗಾಗಲೇ ಮ್ಯಾಡ್‌ಲ್ಯಾಬ್‌ ಸ್ಟುಡಿಯೊದಲ್ಲಿ ಕೆಲಸ ಸಿಕ್ಕಿದೆ. ಉತ್ತಮ ವಿನ್ಯಾಸಕಾರನಾಗುವ ಕನಸು ಕಟ್ಟಿಕೊಂಡಿದ್ದೇನೆ’ ಎಂದು ಪ್ರಾಡಕ್ಟ್‌ ಡಿಸೈನ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಶುಭಂ ಸುನಿಲ್‌ರಾವ್‌ ಪಡ್ಕೆ ಹೇಳಿದರು.

‘ಯಾವುದೇ ಮೊಬೈಲ್‌ ಆ್ಯಪ್‌ ಇರಲಿ ಅಥವಾ ವೆಬ್‌ಸೈಟ್‌ ಇರಲಿ ಮೊದಲು ವಿನ್ಯಾಸ ಆ ನಂತರ ಅದರಲ್ಲಿರುವ ಎಂಜಿನಿಯರಿಂಗ್‌ ಕೆಲಸವನ್ನು ಗುರುತಿಸುತ್ತಾರೆ. ಆದ್ದರಿಂದ ಈ ವಿಭಾಗದಲ್ಲಿ ನನಗೆ ಹೆಚ್ಚು ಆಸಕ್ತಿ’ ಎಂದು ಮಹಾರಾಷ್ಟ್ರದ ಪಡ್ಕೆ ವಿವರಿಸಿದರು.

ದೇಶ ಸೇವೆ ಮಾಡುವ ಗುರಿ: ‘ಅಪ್ಪ ನನ್ನಲ್ಲಿ ದೇಶ ಸೇವೆ ಮಾಡುವ ಕನಸು ಬಿತ್ತಿದರು. ಆದ್ದರಿಂದ ನಾನು ಏರೋಸ್ಪೇಸ್‌ ಎಂಜಿನಿಯರಿಂಗ್‌ ಆಯ್ಕೆ ಮಾಡಿಕೊಂಡೆ. 2010ರಲ್ಲಿಯೇ ನನಗೆ ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗ ಸಿಕ್ಕಿತ್ತು. ಪದವಿ ಪಡೆಯುವ ಉದ್ದೇಶದಿಂದ ವಿರಾಮ ಪಡೆದುಕೊಂಡಿದ್ದೆ. ಈಗ ಮತ್ತೆ ದೇಶ ಸೇವೆಗೆ ಮರಳುತ್ತೇನೆ’ ಎಂದು ಒಡಿಶಾದ ಸೌಮ್ಯಜಿತ್‌ ಬೆಹ್ರಾ ಹೇಳಿದರು.

‘ಎಲ್ಲರೂ ಖಾಸಗಿ ಸಂಸ್ಥೆಗಳ ಉದ್ಯೋಗದ ಬೆನ್ನು ಹತ್ತುತ್ತಾರೆ. ಆದರೆ ನಾನು ಆ ರೀತಿ ಆಗಬಾರದು ಎಂದು ಅಪ್ಪ ಹೇಳುತ್ತಿದ್ದರು. ಭಾರತ ರಕ್ಷಣಾ ತಂತ್ರಗಳಲ್ಲಿ ಅಗ್ರ ಸ್ಥಾನದಲ್ಲಿ ಇರಬೇಕು ಎಂಬುದು ನನ್ನ ಕನಸು. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡಲಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.