ಬೆಂಗಳೂರು: ‘ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಗೂ ಮುನ್ನ ಸ್ಥಳೀಯ ಹದಿನಾರು ಸಾವಿರ ಮಕ್ಕಳಿಗೆ ಗುಂಪು ಆರೋಗ್ಯ ವಿಮೆ ಮಾಡಿಸಿದ್ದುಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಅಲ್ಲ. ಬದಲಿಗೆ ಇದರ ರೂವಾರಿ ಒನ್ ರುಪಿ ಚಾರಿಟಿ ಟ್ರಸ್ಟ್‘ ಎಂದುಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದ ಶಾಸಕ ಗೌರಿಶಂಕರ್ ಪರ ವಕೀಲರು ಹೈಕೋರ್ಟ್ಗೆ ಸ್ಪಷ್ಟಪಡಿಸಿದರು.
‘ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಬೇಕು‘ ಎಂದು ಕೋರಿಪರಾಜಿತ ಅಭ್ಯರ್ಥಿ ಬಿ.ಸುರೇಶ್ ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.
ವಿಚಾರಣೆ ವೇಳೆ ಪ್ರಕರಣದ ಪ್ರತಿವಾದಿಯೂ ಆದ ಡಿ.ಸಿ. ಗೌರಿಶಂಕರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ತುಮಕೂರು ತಾಲ್ಲೂಕಿನ ಹಳ್ಳಿಗಳಆರರಿಂದ ಹದಿನಾರು ವರ್ಷದ ಒಳಗಿನ ಸುಮಾರು 16,386 ರಷ್ಟು ವಿದ್ಯಾರ್ಥಿಗಳಿಗೆ ಒನ್ ರುಪಿ ಚಾರಿಟಿ ಟ್ರಸ್ಟ್ ಆರೋಗ್ಯ ವಿಮೆ ವಿತರಿಸಿದೆ. ದಿ ನ್ಯೂ ಇನ್ಶೂರೆನ್ಸ್ಇಂಡಿಯಾ ಕಂಪನಿಯು ಈ ಗುಂಪು ಆರೋಗ್ಯ ವಿಮೆ ಮಾಡಿಸಿದ್ದು, ಒಟ್ಟು ಪ್ರೀಮಿಯಂ ಮೊತ್ತ 6.57 ಲಕ್ಷ ಪಾವತಿ ಮಾಡಿದೆ’ ಎಂದರು.
‘ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಟ್ರಸ್ಟ್ ಮತ್ತು ಒನ್ ರುಪಿ ಚಾರಿಟಿ ಟ್ರಸ್ಟ್ ಪ್ರತ್ಯೇಕವಾದವುಗಳು. ಅಷ್ಟಕ್ಕೂ ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಟ್ರಸ್ಟ್ ಅಡಿಯಲ್ಲೇ ವಿಮೆ ಮಾಡಿಸಲಾಗಿದೆ ಎಂದರೂ, ಗೌರಿಶಂಕರ್ 2007ರಲ್ಲೇ ತಮ್ಮ ಕುಟುಂಬದಿಂದ ಕಾನೂನುಬದ್ಧವಾಗಿ ಪ್ರತ್ಯೇಕಗೊಂಡಿರುವ ಕಾರಣ ಅವರು ಕಮ್ಮಗೊಂಡನಹಳ್ಳಿ ಸೇವಾ ಟ್ರಸ್ಟ್ ಪದಾಧಿಕಾರಿ ಎಂದು ಪರಿಗಣಿಸಬೇಕಿಲ್ಲ’ ಎಂದರು.
‘ಅರ್ಜಿದಾರರು ಆರೋಪಿಸಿರುವಂತೆ ಹೆಲ್ತ್ ಇನ್ಶೂರೆನ್ಸ್ ಬಾಂಡ್ಗಳನ್ನು ನೀಡಿಲ್ಲ ಮತ್ತುಇನ್ಶೂರೆನ್ಸ್ ಕಂಪನಿಯಲ್ಲಿ ಸಾಫ್ಟ್ವೇರ್ ಅಪ್ಡೇಟ್ ಆಗದೆ, ತಾಂತ್ರಿಕ ದೋಷಗಳ ಕಾರಣ ಉಂಟಾಗಿದ್ದರಿಂದ ಇ–ಕಾರ್ಡ್ಗಳನ್ನು ವಿತರಣೆ ಮಾಡಿಲ್ಲ’ ಎಂದರು.
ಈ ವಾದಾಂಶಗಳಿಗೆ ಸಂಬಂಧಿಸಿದಂತೆ ಅಶೋಕ ಹಾರನಹಳ್ಳಿ ಅವರು, ದಿ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ನ ಹಿರಿಯ ವಿಭಾಗೀಯ ಅಧಿಕಾರಿ ದೇವೇಂದ್ರ ಪ್ರಸಾದ್ ಮತ್ತು ಒನ್ ರುಪಿ ಚಾರಿಟಿ ಟ್ರಸ್ಟ್ನ ಟ್ರಸ್ಟಿಯಾದ ಕಿಶೋರ್ ವರದಾಚಾರ್ ತನಿಖಾಧಿಕಾರಿಗೆ ನೀಡಿರುವ ಹೇಳಿಕೆಗಳನ್ನು ನ್ಯಾಯಪೀಠಕ್ಕೆ ಅರುಹಿದರು.ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಲಾಗಿದೆ.ಗೌರಿಶಂಕರ್ ಪರ ಆರ್.ಹೇಮಂತ ರಾಜ್ ವಕಾಲತ್ತು ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.