ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶ "ಇನ್ವೆಸ್ಟ್ ಕರ್ನಾಟಕ 2025" ಕಾರ್ಯಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಸಚಿವರಾದ ಎಂ. ಬಿ ಪಾಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಭಾರತದ ತಂತ್ರಜ್ಞಾನವನ್ನು ವಿಸ್ತಾರಗೊಳಿಸುವ, ಕರ್ನಾಟಕ ಶಕ್ತಿ ಪ್ರತಿಬಿಂಬಿಸುವ ನಾವೀನ್ಯ ಆವಿಷ್ಕಾರಗಳ ಪ್ರದರ್ಶನ ಜಾಗತಿಕ ಹೂಡಿಕೆದಾರರ ಸಮಾವೇಶದ (ಇನ್ವೆಸ್ಟ್ ಕರ್ನಾಟಕ–2025) ಎರಡನೇ ದಿನ ವಿದೇಶಿ ಪ್ರತಿನಿಧಿಗಳ ಆಕರ್ಷಣೆಯ ಕೇಂದ್ರವಾಗಿತ್ತು.
ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ, ನಾವೀನ್ಯ ಭವಿಷ್ಯದ ಭಾರತವನ್ನು ಗಮನದಲ್ಲಿ ಇಟ್ಟುಕೊಂಡು ಆಯೋಜಿಸಿದ್ದ ‘ಆವಿಷ್ಕಾರಗಳ ಭವಿಷ್ಯ’ ಪ್ರದರ್ಶನದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ನೂತನ ತಂತ್ರಜ್ಞಾನದ ಹಲವು ನಿರ್ಮಾಣಗಳನ್ನು ಪ್ರದರ್ಶಿಸಿದವು.
ವಿದ್ಯುತ್ ಚಾಲಿತ ವಿಮಾನ, ಕಾರುಗಳು, ದ್ವಿಚಕ್ರವಾಹನಗಳು, ಡ್ರೋನ್ ತಂತ್ರಜ್ಞಾನ, ಬಾಂಬರ್ ವಿಮಾನ ಬೆರಗು ಮೂಡಿಸಿದವು. ವೈಮಾಂತರಿಕ್ಷ, ರಕ್ಷಣಾ ಸಾಮಗ್ರಿಗಳ ಜತೆಗೆ, ಕೃಷಿಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಹೊತ್ತು ತರಲಿರುವ ಅಗ್ರಿ-ಟೆಕ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ರೋಗಪತ್ತೆ, ಚಿಕಿತ್ಸೆಗಳನ್ನು ಸುಲಭವಾಗಿಸುವ ಆರೋಗ್ಯಸೇವೆಗಳ ತಂತ್ರಜ್ಞಾನವೂ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಭವಿಷ್ಯದ ತಂತ್ರಜ್ಞಾನ ಬಳಕೆಯ ವಿವಿಧ ಮಜಲುಗಳನ್ನು ತೆರೆದಿಟ್ಟಿತು.
ಟೊಯೊಟ, ಎಂಬೆಸಿ ಗ್ರೂಪ್, ರಾಜ್ಯ ಪ್ರವಾಸೋದ್ಯಮ ಇಲಾಖೆ, ನಿಂಬಸ್, ಸರಳ ಏವಿಯೇಷನ್, ಜಿ.ಇ ಹೆಲ್ತ್ಕೇರ್, ಹೀರೊ ಫ್ಯೂಚರ್ ಎನರ್ಜೀಸ್, ರಿವರ್ ಮೊಬಿಲಿಟಿ, ಸರಳಾ ಏವಿಯೇಶನ್, ಗೆಲಾಕ್ಸಿ ಸ್ಪೇಸ್, ಲ್ಯಾಮ್ ರೀಸರ್ಚ್ ಕಂಪನಿಗಳು ಸೇರಿದಂತೆ ಮರುಬಳಕೆ ಇಂಧನ, ಸೆಮಿಕಂಡಕ್ಟರ್, ಸುಸ್ಥಿರ ತಯಾರಿಕೆಯ ಕಂಪನಿಗಳು ಭಾಗವಹಿಸಿದ್ದವು. ರಾಜ್ಯದ ಸಾಧನೆಗಳನ್ನು ಬಿಂಬಿಸುವ ಪ್ರತ್ಯೇಕ ‘ಕರ್ನಾಟಕ ಪೆವಿಲಿಯನ್’ನ ಕ್ವಿನ್ಸಿಟಿ, ಫ್ಲಯಿಂಗ್ ವೆಡ್ಜ್, ಬೆಲ್ಲಾಟ್ರಿಕ್ಸ್, ಸ್ಕೀಸರ್ವ್, ಫ್ಲಕ್ಸ್ ಆಟೊ ಉದ್ಯಮಗಳ ಪ್ರಾತ್ಯಕ್ಷಿಕೆಗಳು ಪ್ರೇಕ್ಷಕರ ಗಮನ ಸೆಳೆದವು.
‘ಆವಿಷ್ಕಾರಗಳ ಭವಿಷ್ಯ’ ಪ್ರದರ್ಶನವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.