ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಜೈನ್ ಅಭಿವೃದ್ಧಿ ನಿಗಮ ಸ್ಥಾಪಿಸಿ, ನಿಗಮಕ್ಕೆ ಪ್ರತಿವರ್ಷ ₹200 ಕೋಟಿ ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 29 ರಂದು ಜೈನ ಸಮುದಾಯದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಜೈನ ಸಮಾಜ ಹಿತರಕ್ಷಣಾ ಒಕ್ಕೂಟ ತಿಳಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸದಸ್ಯರಾದ ಬಾಬುಭಾಯಿ ಮೆಹ್ತಾ, ಕವಿತಾ ಜೈನ್, ಇಂದ್ರಮಲ್ ನಹಾರ್, ‘ಪ್ರತಿ ಜಿಲ್ಲೆಗೊಂದು ವಿದ್ಯಾರ್ಥಿನಿಲಯ ಹಾಗೂ ಜೈನ್ ಸಮುದಾಯ ಜನಸಂಖ್ಯೆ ಹೆಚ್ಚಿರುವ ಕಡೆಗೆ ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಎರಡು ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
‘ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸ್ಥಾನವನ್ನು ಜೈನ್ ಸಮುದಾಯಕ್ಕೆ ನೀಡಬೇಕು. ನಿಗಮದಲ್ಲಿ ನಿರ್ದೇಶಕರ ಹುದ್ದೆಗೆ ಹಾಗೂ ಆಯೋಗದ ಸದಸ್ಯರಾಗಿ ಜೈನ್ ಸಮುದಾಯದವರನ್ನು ಆಯ್ಕೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಅಲ್ಪಸಂಖ್ಯಾತರ ವಿಭಾಗದಲ್ಲಿ ಜೈನ್ ಸಮುದಾಯಕ್ಕೆ ಶೇಕಡ 5ರಷ್ಟು ಇರುವ ಮೀಸಲಾತಿಯನ್ನು ಶೇ 20ಕ್ಕೆ ಹೆಚ್ಚಿಸಬೇಕು. ಪ್ರಾಚೀನ ಜೈನ್ ಬಸದಿ ಹಾಗೂ ಬಸದಿಗಳ ಆಸ್ತಿ ಸಂರಕ್ಷಣೆಗೆ ಕಾನೂನು ರೂಪಿಸಬೇಕು. ಎಲ್ಲ ಪ್ರಾಚೀನ ಜೈನ್ ಬಸದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.