ಯಲಹಂಕ: ಜಾಲಾ ಹೋಬಳಿ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದ ಜಿಲ್ಲಾಡಳಿತ, 43 ಎಕರೆ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಿ, ₹60 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಿತು.
ಬಾಗಲೂರು ಗ್ರಾಮದ ಸರ್ವೆ ನಂ.176ರಲ್ಲಿ 19 ಎಕರೆ, ಬೈಯ್ಯಪ್ಪನಹಳ್ಳಿಯ ಸರ್ವೆ ನಂ.80ರಲ್ಲಿ 19 ಎಕರೆ 26 ಗುಂಟೆ, ಉತ್ತನಹಳ್ಳಿ ಸರ್ವೆ ನಂ.72ರಲ್ಲಿ 1 ಎಕರೆ 29 ಗುಂಟೆ ಹಾಗೂ ಮಾರನಾಯಕನಹಳ್ಳಿ ಸರ್ವೆ ನಂ.25ರಲ್ಲಿ 1 ಎಕರೆ 14 ಗುಂಟೆ ಒತ್ತುವರಿ ಜಾಗವನ್ನು ತೆರವುಗೊಳಿಸಲಾಯಿತು.
ಉತ್ತನಹಳ್ಳಿ ಬಳಿ ಅಕ್ರಮ ಬಡಾವಣೆ ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ‘2005ರಿಂದ ಈ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದೇವೆ. ನಮಗೆ ಸರ್ಕಾರದಿಂದ ಯಾವುದೇ ನೋಟಿಸ್ ನೀಡಿಲ್ಲ’ ಎಂದು ತಹಶೀಲ್ದಾರ್ ಜತೆಗೆ ವಾದಕ್ಕಿಳಿದು, ತೆರವು ಮಾಡದಂತೆ ಆಗ್ರಹಿಸಿದರು. ವಿರೋಧದ ನಡುವೆಯೂ ಸರ್ಕಾರಿ ನಾಮಫಲಕ ಅಳವಡಿಸಿ ಜಾಗವನ್ನು ವಶಕ್ಕೆ ಪಡೆಯಲಾಯಿತು.
‘ಸಂಬಂಧಪಟ್ಟ ಒತ್ತುವರಿದಾರರಿಗೆ ಒಂದು ವಾರದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ, ಅವರ ಬಳಿ ಜಮೀನು ಮಂಜೂರಾಗಿರುವುದಕ್ಕೆ ಇಲ್ಲದ್ದರಿಂದ ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.