ADVERTISEMENT

ಜಪಾನ್‌ನಲ್ಲಿ ಕರುನಾಡ ಆನೆಗಳ ಚಿನ್ನಾಟ! ಬನ್ನೇರುಘಟ್ಟ ಸಿಬ್ಬಂದಿ ಭಾವುಕ ಕ್ಷಣ..

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 20:08 IST
Last Updated 17 ಆಗಸ್ಟ್ 2025, 20:08 IST
ನೀರಾಟದಲ್ಲಿ ತೊಡಗಿರುವ ಆನೆಗಳು
ನೀರಾಟದಲ್ಲಿ ತೊಡಗಿರುವ ಆನೆಗಳು   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಜಪಾನಿನ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ತೆರಳಿದ್ದ ನಾಲ್ಕು ಆನೆಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡಿವೆ. ಅಲ್ಲಿನ ರೀತಿ–ರಿವಾಜು ಕಲಿಯ ತೊಡಗಿವೆ. 

ಇಲ್ಲಿಂದ ಹೋಗುವಾಗ ಇಲ್ಲದ ಮನಸ್ಸಿನಲ್ಲಿ ಕಣೀರು ಹಾಕಿತ್ತಾ ತೆಳಿರಳಿದ್ದ ಆನೆಗಳಿಗೆ ಹೊಸ ಮನೆ, ಹೊಸ ವಾತಾವರಣ ಸಂಭ್ರಮ ತಂದಿದೆ. ಆದರೆ, ಮಾವುತರು ಮತ್ತು ಮೇಲ್ವಿಚಾರಣೆ ತಂಡಕ್ಕೆ ಭಾರದ ಮನಸ್ಸು. ಆದರೂ, ‌ಖುಷಿಯ ವಿದಾಯದೊಂದಿಗೆ ವಾಪಸ್‌ ಬಂದಿದ್ದಾರೆ. 

‌‘ಕಬ್ಬು ತಿನ್ನಿಸಿ ವಿದಾಯ ಹೇಳುವಾಗ ನಿಮ್ಮಿಂದ ದೂರ ಆಗುತ್ತಿವೆ ಎಂಬ ನೋವು ಕಾಡುತ್ತಿತು. ಆದರೆ, ಸಂಭ್ರಮದಿಂದ ಚಿನ್ನಾಟ ಆಡುತ್ತಿರುವುದನ್ನು ಕಂಡು ಆನಂದವಾಯಿತು. ನಮ್ಮ ಆನೆಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅಲ್ಲಿನ ಸಿಬ್ಬಂದಿಗೆ ಹೇಳಿ ಹೊರಡುವಾಗ ಕಣ್ಣಿಂಚಿನಲ್ಲಿ ನೀರು ಚಿನುಗಿತು’ ಎಂದು ಅಲ್ಲಿನ ಕ್ಷಣಗಳನ್ನು ನೆನೆದು ಸಿಬ್ಬಂದಿ ಭಾವುಕರಾದರು.

ADVERTISEMENT

ಜುಲೈ 24ರಂದು ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಸುರೇಶ್, ತುಳಸಿ, ಗೌರಿ ಮತ್ತು ಶೃತಿ ಎಂಬ ಆನೆಗಳನ್ನು ಕಳುಹಿಸಿ ಕೊಡಲಾಗಿತ್ತು. ಇವುಗಳ ಜತೆ ಮಾವುತರು, ವೈದ್ಯರು, ಮೇಲ್ವಿಚಾರಕರು ಮತ್ತು ಜೀವಶಾಸ್ತ್ರಜ್ಞರು ಸೇರಿ ಎಂಟು ಮಂದಿ ತಂಡವೂ ತೆರಳಿತ್ತು.

ಎಂಟು ಮಂದಿ ತಂಡ ಆನೆಗಳ ಜತೆಗೆ 15 ದಿನ ಉಳಿದುಕೊಂಡು ಹೊಸ ಪರಿಸರಕ್ಕೆ ಹೇಗೆ ಹೊಂದಿಕೊಳ್ಳಬೇಕು. ಯಾವ ರೀತಿ ವರ್ತನೆ ಮಾಡಬೇಕೆಂದು ಮಕ್ಕಳಿಗೆ ಬುದ್ಧಿವಾದ ಹೇಳಿದಂತೆ ತರಬೇತಿ ನೀಡಿದ್ದಾರೆ. ಜತೆಗೆ ಆರೈಕೆ, ಲಾಲನೆ–ಪಾಲನೆ ಹೇಗೆ ಮಾಡಬೇಕೆಂದು ಹಿಮೇಜಿ ಸೆಂಟ್ರಲ್‌ ಪಾರ್ಕ್‌ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ. ಆನೆಗಳ ಜತೆ ತೆರಳಿದ್ದ ತಂಡ ಆಗಸ್ಟ್‌ 10ರಂದು ಬನ್ನೇರುಘಟ್ಟಕ್ಕೆ ವಾಪಸ್‌ ಬಂದಿದೆ.

ಹೊಸ ‍ಪರಿಸರದಲ್ಲಿ ಆರೋಗ್ಯವಾಗಿರುವ ಕಾರಣ ಕ್ಯಾರಂಟೈನ್‌ನಿಂದ ಮುಕ್ತಗೊಳಿಸಲಾಗಿದೆ. ಹಿಮೇಜಿ ಸೆಂಟ್ರಲ್‌ ಪಾರ್ಕ್‌ನಲ್ಲಿ ಗಜಮುಖ ಗಣಪತಿಗೆ ಪೂಜೆ ಸಲ್ಲಿಸುವುದರೊಂದಿಗೆ ಆನೆ ಬಿಡಾರವನ್ನು ಅನಾವರಣಗೊಳಿಸಲಾಗಿದೆ. ಆಗಸ್ಟ್‌ 9ರಿಂದ ಹಿಮೇಜಿ ಸೆಂಟ್ರಲ್‌ ಪಾರ್ಕ್‌ನಲ್ಲಿ ಆನೆಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುತ್ತಾರೆ ಮಾವುತ ಕಾರ್ತಿಕ್‌.

ಮಣ್ಣಿನೊಂದಿಗೆ ಆಟವಾಡುತ್ತಿರುವ ಆನೆ
ಆನೆ ಸುರೇಶನ ಮಜ್ಜನ

ಮುದ್ದೆ ತಯಾರಿಸಿದ ಜಪಾನ್‌ ಸಿಬ್ಬಂದಿ

ಜಪಾನ್‌ನ ಹಿಮೇಜಿ ಸೆಂಟ್ರಲ್‌ ಪಾರ್ಕ್‌ನಲ್ಲಿ ಗಜಮುಖ ಗಣಪತಿಗೆ ಪೂಜೆ ಸಲ್ಲಿಸುವುದರೊಂದಿಗೆ ಆನೆ ಬಿಡಾರ ಅನಾವರಣಗೊಳಿಸಲಾಯಿತು
ಸೂರ್ಯಸೇನ್‌
ಸುರೇಶ್‌ 
ಐಶ್ವರ್ಯಾ

ಜಪಾನ್‌ನ ವಾತಾವರಣಕ್ಕೆ ಆನೆಗಳು ಹೊಂದಿಕೊಂಡು ಅಲ್ಲಿಯ ಮಾವುತರೊಂದಿಗೆ ಸಂವಹನ ಸಾಧಿಸಿರುವುದು ಸಂತಸ ತಂದಿದೆ

ಸೂರ್ಯಸೇನ್‌ ಕಾರ್ಯನಿರ್ವಹಣಾಧಿಕಾರಿ ಬನ್ನೇರುಘಟ್ಟ ಜೈವಿಕ ಉದ್ಯಾನ

ದೂರದ ದೇಶಕ್ಕೆ ತೆರಳಿ ಪಳಗಿಸಿ ಅಲ್ಲಿಂದ ಹಿಂತಿರುವಾಗ ದುಃಖವಾಯಿತು. ಬರುವಾಗ ಏನೋ ಕಳೆದುಕೊಂಡು ಬಂದ ಅನುಭವವಾಯಿತು

ಸುರೇಶ್ ಆನೆಗಳ ಮೇಲ್ವಿಚಾರಕ

ಆನೆ ಶೃತಿ ಜಪಾನ್‌ಗೆ ತೆರಳುತ್ತಾಳೆ ಎಂದಾಗ ಕೊಂಚ ಬೇಸರವಾಯಿತು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ. ಅಲ್ಲಿನ ಸಿಬ್ಬಂದಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು ಮನಸ್ಸಿಗೆ ಖುಷಿ ತಂದಿದೆ

ಕಾರ್ತಿಕ್‌ ಶೃತಿ ಆನೆಯ ಮಾವುತ

ಪಾಲನೆಗೆ ಕೊರತೆ ಇಲ್ಲ ನಾಲ್ಕು ಆನೆಗಳು ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿದ್ದು ಆರೋಗ್ಯವಾಗಿವೆ. ಅಲ್ಲಿನ ಸಿಬ್ಬಂದಿಗೆ ಉತ್ತಮವಾಗಿ ಸ್ಪಂದಿಸುತ್ತಿವೆ ಎಂದು ಆನೆಗಳ ಜತೆ ತೆರಳಿದ್ದ ಬನ್ನೇರುಘಟ್ಟದ ಜೀವಶಾಸ್ತ್ರಜ್ಞೆ ಐಶ್ವರ್ಯಾ ಮಾಹಿತಿ ನೀಡಿದರು. ಕಠಿಣವಾದ ತರಬೇತಿ ನೀಡಿದ್ದರಿಂದ ಆನೆಗಳು ವಿಮಾನದಲ್ಲಿ ಸುಗಮವಾಗಿ ಪ್ರಯಾಣಿಸಲು ಅನುಕೂಲವಾಯಿತು. ಜಪಾನ್‌ನ ಜನರು ಶಿಸ್ತಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆನೆಗಳ ಪಾಲನೆಯನ್ನು ಕರಾರುವಕ್ಕಾಗಿ ಮಾಡುತ್ತಿರುವುದು ಸಂತಸ ತಂದಿದೆ. ಬನ್ನೇರುಘಟ್ಟದ ಆನೆಗಳನ್ನು ಜಪಾನ್‌ನಲ್ಲಿ ಬಿಟ್ಟು ನೆಮ್ಮದಿಯಿಂದ ಬರಲು ಸಾಧ್ಯವಾಯಿತು  ಎಂದು ತಿಳಿಸಿದರು.

ಮುದ್ದೆ ಮಾಡುವುದನ್ನು ಕಲಿತ ಜಪಾನ್‌ ಸಿಬ್ಬಂದಿ

ಅಲ್ಲಿನ ಸಿಬ್ಬಂದಿಗೆ ಆನೆಗೆ ಅವಶ್ಯಕ ಆಹಾರ ತಯಾರು ಮಾಡುವ ತರಬೇತಿ ನೀಡಲಾಗಿದೆ. ಪ್ರತಿ ಆನೆಗೆ 150 ಕೆ.ಜಿ ಆಹಾರ ನೀಡಬೇಕು. ಅದರಲ್ಲಿ ಹಣ್ಣು ಹುಲ್ಲು ಮುದ್ದೆ ಬೆಲ್ಲ ಸೇರಿಸಬೇಕು. ಜಪಾನ್‌ನವರಿಗೆ ಬನ್ನೇರುಘಟ್ಟದ ಬಾಣಸಿಗರು ವಿವಿಧ ಭಕ್ಷ್ಯ ತಯಾರಿ ಮಾಡುವುದನ್ನು ಕಲಿಸಿಕೊಟ್ಟಿದ್ದಾರೆ.  ‘ಹಿಮೇಜಿ ಸೆಂಟ್ರಲ್‌ ಪಾರ್ಕ್‌ ಸಿಬ್ಬಂದಿ ನಾವು ಹೇಳಿಕೊಟ್ಟ ಪಾಠ ಬೇಗ ಕಲಿತು ಅವರೇ ಮುದ್ದೆ ತಯಾರಿಸುತ್ತಿದ್ದಾರೆ’ ಎಂದು ಜಪಾನ್‌ಗೆ ತೆರಳಿದ್ದ ಆನೆಗಳ ಮೇಲ್ವಿಚಾರಕ ಸುರೇಶ್‌ ತಿಳಿಸಿದರು. ‘ಕೊನೆಯ ನಾಲ್ಕು ದಿನಗಳು ನಾವ್ಯಾರೂ ಸಹಾಯ ಮಾಡದೇ ಅವರನ್ನೇ ಅಡುಗೆ ಮಾಡಲು ಬಿಟ್ಟೆವು. ಅವರು ಪಕ್ಕಾ ಭಾರತೀಯ ಬಾಣಸಿಗರಂತೆ ಮುದ್ದೆ ಮಾಡಿ ಆನೆಗಳಿಗೆ ತಿನಿಸಿದರು. ಆನೆಗಳು ಇವರ ಕೈ ರುಚಿಗೆ ಪಳಗಿವೆ’ ಎಂದು ಅಲ್ಲಿನ ಅನುಭವ ಹಂಚಿಕೊಂಡರು ಸಿಬ್ಬಂದಿ. 

ಜಪಾನ್‌ಗೆ ತೆರಳಿದ್ದ ಬನ್ನೇರುಘಟ್ಟ ತಂಡ

ಬನ್ನೇರುಘಟ್ಟದ ಜೀವಶಾಸ್ತ್ರಜ್ಞೆ ಐಶ್ವರ್ಯಾ ಪಶು ವೈದ್ಯರಾದ ಕಿರಣ್‌ ಆನಂದ್ ಆನೆ ಮೇಲ್ವಿಚಾರಕ ಸುರೇಶ್ ಮಾವುತರಾದ ಕಾಳಪ್ಪ ದೇವಪ್ಪ ಕಾರ್ತಿಕ್‌ ಅಯ್ಯಪ್ಪ. ಇವೆರೆಲ್ಲರೂ ಆನೆಗಳೊಂದಿಗೆ ಜಪಾನ್‌ಗೆ ತೆರಳಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ತರಬೇತಿ ನೀಡಿದ ಸಿಬ್ಬಂದಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.