ADVERTISEMENT

ಕೋಲಾರ ಲೋಕಸಭಾ ಕ್ಷೇತ್ರಕ್ಕಾಗಿ ಜೆಡಿಎಸ್‌ ಮುಖಂಡರ ಪಟ್ಟು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
ಲೋಕಸಭಾ ಚುನಾವಣೆ 
ಲೋಕಸಭಾ ಚುನಾವಣೆ    

ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡಬಾರದು ಎಂದು ಅಲ್ಲಿನ ಜೆಡಿಎಸ್‌ ಮುಖಂಡರು ಪಕ್ಷದ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭಾನುವಾರ ಭೇಟಿಮಾಡಿ ಒತ್ತಡ ಹೇರಿದ್ದಾರೆ.

ಬಿಜೆಪಿ– ಜೆಡಿಎಸ್‌ ಮೈತ್ರಿಕೂಟದ ಕ್ಷೇತ್ರ ಹೊಂದಾಣಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮಂಡ್ಯ, ಹಾಸನ ಕ್ಷೇತ್ರಗಳು ಜೆಡಿಎಸ್‌ಗೆ ದೊರಕುವುದು ಬಹುತೇಕ ಖಚಿತವಾಗಿದೆ. ಕೋಲಾರದ ಬದಲಿಗೆ ಚಿಕ್ಕಬಳ್ಳಾಪುರ ಕ್ಷೇತ್ರ ಆಯ್ದುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ ಎಂಬ ಮಾಹಿತಿಯಿಂದ ಸ್ಥಳೀಯ ಮುಖಂಡರು ಆತಂಕಕ್ಕೆ ಒಳಗಾಗಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಪಕ್ಷದ ನೆಲೆ ಇದೆ. ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಟ್ಟರೆ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಹಲವು ಮುಖಂಡರು ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಕೋಲಾರದಲ್ಲಿ ಸ್ಪರ್ಧೆಯ ಭರವಸೆ’: ‘ಅಮಿತ್‌ ಶಾ ಅವರು ಕೋಲಾರದ ಬದಲಿಗೆ ಚಿಕ್ಕಬಳ್ಳಾಪುರ ಆಯ್ದುಕೊಳ್ಳುವಂತೆ ಸಲಹೆ ನೀಡಿದ್ದು ನಿಜ. ಆದರೆ, ನಾವು ಅದನ್ನು ಒಪ್ಪಿಕೊಂಡಿಲ್ಲ. ನಮ್ಮ ಮೂವರು ಶಾಸಕರಿರುವ ಕೋಲಾರ ಕ್ಷೇತ್ರವನ್ನೇ ನೀಡಲು ಕೇಳಿದ್ದೇವೆ. ಕ್ಷೇತ್ರ ಕೈತಪ್ಪುವುದಿಲ್ಲ. ಎಲ್ಲರೂ ಚುನಾವಣಾ ತಯಾರಿ ಆರಂಭಿಸಿ ಎಂದು ಮುಖಂಡರಿಗೆ ಸಮಾಧಾನಿಸಿ ಕುಮಾರಸ್ವಾಮಿ ಕಳುಹಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.