ADVERTISEMENT

ಎಚ್‌ಡಿಕೆ ನೆರವಿನಲ್ಲಿ ವಿಐಎಸ್‌ಎಲ್‌ ಪುನಶ್ಚೇತನಗೊಳಿಸಿ: ಸಿ.ಬಿ. ಸುರೇಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 23:30 IST
Last Updated 20 ಮಾರ್ಚ್ 2025, 23:30 IST
ಎಚ್‌ಡಿಕೆ
ಎಚ್‌ಡಿಕೆ   

ಬೆಂಗಳೂರು: ‘ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರದಿಂದ ₹ 10,000 ಕೋಟಿ ನೆರವು ಒದಗಿಸಲು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಿದ್ದಾರೆ. ಸರ್ಕಾರ ರಾಜಕೀಯ ಸಂಘರ್ಷ ಬದಿಗಿಟ್ಟು ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ ಬಾಬು ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸರ್ಕಾರದ ಪ್ರಮುಖರು ಸಂಕುಚಿತ ಮನೋಭಾವ ಬದಿಗಿಟ್ಟು ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಬೇಕು. ಎಚ್‌ಎಂಟಿ ಸೇರಿದಂತೆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದರು.

ಬೆಂಗಳೂರು ಸಮೀಪದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಅಂತಹ ದುಬಾರಿ ಯೋಜನೆ ಕೈಬಿಟ್ಟು, ಎಚ್‌ಎಎಲ್‌ ವಿಮಾನ ನಿಲ್ದಾಣವನ್ನೇ ಅಭಿವೃದ್ಧಿಪಡಿಸಬೇಕು. ತೆಂಗು ಬೆಳೆಗಾರರಿಗೆ ನೆರವಾಗಲು ಎಳನೀರನ್ನು ಟೆಟ್ರಾ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT
ಮೀನುಗಾರಿಕಾ ದೋಣಿಗಳಿಗೆ ಸೀಮೆಎಣ್ಣೆ ಸಹಾಯಧನ ಇತ್ತು. ಅದೇ ಮಾದರಿಯಲ್ಲಿ ಪೆಟ್ರೋಲ್‌ ಖರೀದಿಗೂ ಸಹಾಯಧನ ನೀಡಬೇಕುಡಿ.
ವೇದವ್ಯಾಸ ಕಾಮತ್‌, ಬಿಜೆಪಿ ಶಾಸಕ
ರೈತರ ಕೃಷಿ ಸಾಲ ಮನ್ನಾ ಬಾಬ್ತು ₹ 300 ಕೋಟಿ ಇನ್ನೂ ಬಿಡುಗಡೆ ಆಗಿಲ್ಲ. ಈ ಬಾರಿ ಬಜೆಟ್‌ನಲ್ಲೇ ಅನುದಾನ ಒದಗಿಸಬೇಕು
ಸಿ.ಎನ್. ಬಾಲಕೃಷ್ಣ, ಜೆಡಿಎಸ್‌ ಶಾಸಕ
ರಾಜ್ಯದಲ್ಲಿ ಆಯಾ ಜಾತಿ, ಧರ್ಮದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು
ಪಠಾಣ್‌ ಯಾಸೀರ್‌ ಅಹ್ಮದ್ ಖಾನ್‌, ಕಾಂಗ್ರೆಸ್‌ ಶಾಸಕ
ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರಿಲ್ಲದೆ ಬಾವಿಗಳು ಬತ್ತುತ್ತಿವೆ. ಬೆಂಗಳೂರಿನ ತಾರಾ ಹೋಟೆಲ್‌ಗಳು, ಬಂಗಲೆಗಳಲ್ಲಿ ಈಜು ಕೊಳಗಳು ನೀರಿನಿಂದ ತುಂಬಿವೆ
ಶರಣು ಸಲಗರ ಬಿಜೆಪಿ ಶಾಸಕ
‘ಶಿಕ್ಷೆಯ ಪ್ರಮಾಣ ಹೆಚ್ಚಬೇಕು’
ರಾಜ್ಯದಲ್ಲಿ 2013ರಿಂದ 2023ರವರೆಗೆ ದಾಖಲಾದ 1,322 ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ 10 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ, ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಶಿಕ್ಷೆ ಪ್ರಮಾಣ ಶೇಕಡ 0.76ರಷ್ಟಿದೆ. ಹೀಗೆ ಆದರೆ ಹೆಣ್ಣು ಮಕ್ಕಳು ಜೀವನ ನಡೆಸುವುದು ಹೇಗೆ ಎಂದು ಬಿಜೆಪಿಯ ಶಶಿಕಲಾ ಜೊಲ್ಲೆ ಪ್ರಶ್ನಿಸಿದರು. ಅಂಗವಿಕಲ ಮತ್ತು ಬುದ್ದಿಮಾಂದ್ಯ ಮಕ್ಕಳ ಅಭಿವೃದ್ಧಿಗೆ ಒತ್ತು ನೀಡಬೇಕು. ವಿಶೇಷ ಒಲಂಪಿಕ್ಸ್‌ನಲ್ಲಿ ಪಾಲ್ಗೊಂಡು, ಪದಕ ಗಳಿಸಿದವರಿಗೆ ಆರ್ಥಿಕ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ನಿಯಮ ಸಡಿಲಿಕೆಗೆ ಆಗ್ರಹ
‘ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ವಾಸಿಗಳಿಗೆ ಹಕ್ಕು ನೀಡಲು ಮೂರು ತಲೆಮಾರಿನ ವಸತಿ ದಾಖಲೆ ಕೇಳುತ್ತಿದ್ದಾರೆ. ಅದನ್ನು ಬದಲಿಸಿ, ಒಂದು ತಲೆಮಾರಿನ ದಾಖಲೆಗೆ ಸೀಮಿತಗೊಳಿಸಬೇಕು. ಈ ಸಂಬಂಧ ನಿಯಮ ತಿದ್ದುಪಡಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಆಗ್ರಹಿಸಿದರು. ‘ಕಸ್ತೂರಿ ರಂಗನ್‌ ವರದಿ ಜಾರಿಯಾಗುತ್ತದೆ ಎಂಬ ಆತಂಕ ಹತ್ತು ಜಿಲ್ಲೆಗಳಲ್ಲಿದೆ. ವರದಿ ತಿರಸ್ಕರಿಸುವಂತೆಯೂ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದರು.
ಲಾಡ್‌– ಶರಣು ವಾಕ್ಸಮರ
ಗೋ ಸಂರಕ್ಷಣೆ ಕುರಿತು ಬಿಜೆಪಿಯ ಶರಣು ಸಲಗರ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ‘ದೇಶವು ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ನಿಮಗೆ ಧೈರ್ಯವಿದ್ದರೆ ಗೋಮಾಂಸ ರಫ್ತು ನಿಷೇಧಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ’ ಎಂದರು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಕೆಲಕಾಲ ಜೋರಾಗಿ ವಾಕ್ಸಮರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.