ADVERTISEMENT

ಕೈ-ಕಾಲು ಕಟ್ಟಿ ವೃದ್ಧೆ ಹತ್ಯೆ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 19:48 IST
Last Updated 18 ಸೆಪ್ಟೆಂಬರ್ 2019, 19:48 IST
ಪಾರ್ವತಮ್ಮ
ಪಾರ್ವತಮ್ಮ   

ಬೆಂಗಳೂರು: ವೃದ್ಧೆಯೊಬ್ಬರ ಕೈ-ಕಾಲು ಕಟ್ಟಿ ಹತ್ಯೆ ಮಾಡಿದ ದುಷ್ಕರ್ಮಿಗಳು, ಬಳಿಕ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಸುಂಕದಕಟ್ಟೆ ಮುತ್ತಾಯಸ್ವಾಮಿ ಬಡಾವಣೆ ನಿವಾಸಿ ಪಾರ್ವತಮ್ಮ (61) ಕೊಲೆಯಾದ ಮಹಿಳೆ. ಬೆಸ್ಕಾಂ ‘ಡಿ’ ಗ್ರೂಪ್ ನೌಕರರಾಗಿದ್ದ ಪಾರ್ವತಮ್ಮ, ಒಂದು ವರ್ಷದ ಹಿಂದೆಯಷ್ಟೇ ನಿವೃತ್ತರಾಗಿದ್ದು, ಅವರ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು.

ಸುಂಕದಕಟ್ಟೆಯಲ್ಲಿ ಸ್ವಂತ ಕಟ್ಟಡ ಹೊಂದಿರುವ ಪಾರ್ವತಮ್ಮ, ಮೊದಲ ಮಹಡಿಯಲ್ಲಿ ನೆಲೆಸಿದ್ದರೆ, ಅವರ ಮಗ ಮಂಜುನಾಥನ ಕುಟುಂಬ ಎರಡನೇ ಮಹಡಿಯಲ್ಲಿ ವಾಸವಿತ್ತು. ಪಾರ್ವತಮ್ಮ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ADVERTISEMENT

ರಿಯಲ್ ಎಸ್ಟೇಟ್ ವ್ಯವಹಾರ ಸಂಬಂಧ ಮಂಜುನಾಥ್ ಬುಧವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿ ರುವ ದುಷ್ಕರ್ಮಿಗಳು ವೃದ್ಧೆಯ ಕೈ-ಕಾಲು ಕಟ್ಟಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮಗ ಮನೆಗೆ ಮರಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ವೃದ್ಧೆಗೆ ಮಂಜುನಾಥ್ ಒಬ್ಬರೇ ಪುತ್ರ. ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯ ಗಳನ್ನು ಪರಿಶೀಲಿಸಲಾಗುತ್ತಿದೆ. ಕಳವು ಆಗಿರುವ ವಸ್ತುಗಳ ಮೌಲ್ಯ ತಿಳಿದು ಬಂದಿಲ್ಲ. ಕೃತ್ಯ ನಡೆದಾಗ ಮೊಮ್ಮಗಳು ಮೇಲಿನ ಮಹಡಿಯಲ್ಲಿದ್ದರು. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

**

ಕಳ್ಳತನಕ್ಕೆ ಬಂದವರೂ ಕೃತ್ಯ ಎಸಗಿದ್ದಾರೊ, ಪರಿಚಿತರ ಕೆಲಸವೊ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರ ಬಂಧಿಸಲಾಗುವುದು
- ರಮೇಶ್ ಬಿ., ಪಶ್ಚಿಮ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.