ADVERTISEMENT

ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 7:15 IST
Last Updated 2 ನವೆಂಬರ್ 2023, 7:15 IST
   

ಬೆಂಗಳೂರು: ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ, ಬದಲಿಗೆ ಕೆಲಸ ಮಾಡುವ ಸಮಯವನ್ನು ಹೆಚ್ಚು ಉಪಯುಕ್ತವಾಗಿ ಕಳೆದು ಉಳಿದ ಸಮಯವನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಿರಿ ಎಂದು ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಡೆ ಹೇಳಿದರು. ಹೆಚ್ಚು ಸಮಯ ಕೆಲಸ ಮಾಡುವುದು ಹೆಚ್ಚು ಉತ್ಪಾದಕತೆ ಎನ್ನುವುದು ತಪ್ಪು ಕಲ್ಪನೆಯಾಗಿದೆ. ಕೆಲಸ ಮಾಡುವ ಅವಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದಷ್ಟೇ ನಮಗೆ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ದೇಶದ ಪ್ರಗತಿ ಸಾಧಿಸಲು ಎಲ್ಲರೂ ವಾರಕ್ಕೆ ಎಪ್ಪತ್ತು ಗಂಟೆಗಳು ಕೆಲಸ ಮಾಡಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ನೀಡಿದರು.

ಅವರು ಟ್ರೇಡಿಂಗ್ ಮತ್ತು ಶಿಕ್ಷಣದ ವಿಶ್ವದಲ್ಲಿ ಜ್ಞಾನ, ನೆಟ್ವರ್ಕಿಂಗ್ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ದಿ ಟ್ರೇಡಿಂಗ್ ಮೈಂಡ್ಸ್ ಆಯೋಜಿಸಿದ್ದ “ಟ್ರೇಡರ್ಸ್ ಮೀಟಪ್ ಮತ್ತು ಎಜುಕೇಷನ್ ಹೀರೋಸ್” ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ನಾವು ನಮ್ಮ ಮಕ್ಕಳಿಗೆ ಇಂದು ಅಣುಬಾಂಬ್ ತಯಾರಿಕೆ ಹೇಳಿಕೊಟ್ಟಿದ್ದೇವೆ. ಆದರೆ ಅದನ್ನು ಬಳಸುವುದನ್ನು ಮಾತ್ರ ಹೇಳಿಕೊಟ್ಟಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಶ್ರೀ ಗೋಪಾಲ ಗೌಡ ಅವರು, “ಬರೀ ಆರ್ಥಿಕತೆಯ ಅಭಿವೃದ್ಧಿ ಮಾತ್ರವಲ್ಲ, ಎಲ್ಲ ರಂಗಗಳಲ್ಲೂ ನಾವು ಅಭಿವೃದ್ಧಿ ಸಾಧಿಸಬೇಕಾಗಿದೆ. ಬರೀ ಆರ್ಥಿಕತೆಯ ಪ್ರಗತಿ ಮಾತ್ರ ಪ್ರಗತಿ ಎನ್ನಿಸಿಕೊಳ್ಳುವುದಿಲ್ಲ” ಎಂದರು.

ದಿ ಟ್ರೇಡಿಂಗ್ ಮೈಂಡ್ಸ್ ಸಂಸ್ಥೆಯು ತನ್ನ ಮೊದಲ ವಾರ್ಷಿಕೋತ್ಸವವನ್ನು ಬೆಂಗಳೂರಿನಲ್ಲಿ ಸಂಭ್ರಮದಲ್ಲಿ ಆಚರಿಸಿತು. ದಿ ಟ್ರೇಡಿಂಗ್ ಮೈಂಡ್ಸ್ ಸಂಸ್ಥಾಪಕರಾದ ಶ್ರೀ ಪವನ್ ಜೋಷಿ, ಶ್ರೀ ಅನುಶ್ರುತ್ ಮಂಚಿ, ಡಾ.ವಿನಯ್ ಶೆಟ್ಟಿ ಅಲ್ಲದೆ ಬಿಜೆಪಿ ಮುಖಂಡರು ಹಾಗೂ ಉದ್ಯಮಿಯಾದ ಶ್ರೀ ಅನಿಲ್ ಶೆಟ್ಟಿ ಹಾಗೂ ಟ್ರೇಡಿಂಗ್ ಮೈಂಡ್ಸ್ ಸಂಸ್ಥಾಪಕರಾದ ಗಿರಿಧರ್ ಉಪಸ್ಥಿತರಿದ್ದರು.

ಈ ವಾರ್ಷಿಕ ಸಭೆಯಲ್ಲಿ ಸಮಾಜದ ಎಲ್ಲ ವಲಯಗಳ ಟ್ರೇಡರ್ ಗಳನ್ನು ಆಕರ್ಷಿಸುತ್ತದೆ. ಈ ವಿಶಿಷ್ಟ ಕಾರ್ಯಕ್ರಮವು ಮಾರುಕಟ್ಟೆಯಲ್ಲಿ ಅವರ ಜ್ಞಾನ, ಅನುಭವಗಳ ವಿನಿಮಯ ಮತ್ತು ಟ್ರೇಡ್ ಲೈವ್ ಮಾಡಲು ಟ್ರೇಡರ್ ಗಳನ್ನು ಒಟ್ಟಿಗೆ ಸೇರಿಸುವ ವೇದಿಕೆಯಾಗಿದೆ. 1000ಕ್ಕೂ ಹೆಚ್ಚು ಮಂದಿ ಆನ್ಲೈನ್ ನಲ್ಲಿ ನೋಂದಣಿಯಾಗಿದ್ದರು. ಆಯ್ದ 300ಕ್ಕೂ ಹೆಚ್ಚು ಮಂದಿ ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.