
ರಾಜರಾಜೇಶ್ವರಿ ನಗರ: ಮುಸ್ಲಿಮರ ವಾರದ ವಿಶೇಷ ಪ್ರಾರ್ಥನೆಯಲ್ಲಿ ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್, ರಾಜ್ಯಕಾರ್ಯದರ್ಶಿ ಜ. ಅಕ್ಬರ್ ಅಲಿ ಉಡುಪಿ ಅವರು ಕನ್ನಡದಲ್ಲಿ ಪ್ರವಚನ ನೀಡಿದರು.
ಮತ್ತಿಕೆರೆಯ ಮಸ್ಜಿದ್. ಎ. ತಾಹದಲ್ಲಿ (ಮಸೀದಿ) ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ‘ನೆರೆಹೊರೆಯವರ ಹಕ್ಕುಗಳ’ ಬಗ್ಗೆ ಕನ್ನಡದಲ್ಲಿ ಪ್ರವಚನ ನೀಡಿದ ಅವರು, ‘ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಸಹೋದರ-ಸಹೋದರಿಯರು, ಹಿರಿಯರು, ಸ್ನೇಹಿತರಾಗಿ ಕೂಡಿ ಬಾಳಬೇಕು. ಬೇರೋಬ್ಬರಿಗೆ ದ್ವೇಷ, ಅಸೂಯೆ, ಕೆಡುಕು ಬಯಸಬಾರದು. ಇಸ್ಲಾಂ ಧರ್ಮ ಸೇರಿ ಎಲ್ಲ ಧರ್ಮಗಳು ಇದನ್ನೇ ಹೇಳುತ್ತವೆ’ ಎಂದು ಹೇಳಿದರು.
‘ಮಸೀದಿಯ ಗೋಡೆ ಮತ್ತು ಕಿಟಕಿಗಳಿಗೆ ಖುರಾನ್ ಹಾಗೂ ಪ್ರವಾದಿಯವರ ವಚನಗಳನ್ನು ಹಾಕಲಾಗಿದ್ದು, ಮಸೀದಿಯಲ್ಲಿ ಕನ್ನಡಮಯಗೊಳಿಸಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ತೋರಿಸುತ್ತದೆ’ ಎಂದರು.
ಮಸೀದಿಯ ಅಧ್ಯಕ್ಷ ಸಮಿಉಲ್ಲಾಖಾನ್ ಮಾತನಾಡಿ, ‘ಎಲ್ಲ ಸಮುದಾಯಗಳ ಮತ್ತು ಮುಖಂಡರ ಜೊತೆಗೆ ಸೌಹಾರ್ದದ ಜೀವನ ಸಾಗಿಸಬೇಕೆಂದು ಎಲ್ಲ ಧರ್ಮಗಳು ಹೇಳುತ್ತವೆ. ಶಾಂತಿ, ನೆಮ್ಮದಿ ಸಿಗಬೇಕಾದರೆ ನಾವು ಕನ್ನಡಿಗರು, ಈ ಮಣ್ಣಿನ ಮಕ್ಕಳೆಂದು ಜೀವನ ಸಾಗಿಸಬೇಕು’ ಎಂದರು.
ಉಪಾಧ್ಯಕ್ಷ ಶಹಜಹಾನ್. ಕಾರ್ಯದರ್ಶಿ ಬಶೀರ್ ಅಹಮ್ಮದ್ ಬೇಗ್, ಕೋಶ್ಯಾಧ್ಯಕ್ಷ ಸಾಗರ್ ಸಮಿವುಲ್ಲಾ, ಬೈತುಲ್ ಮಾಲ್ ಅಧ್ಯಕ್ಷ ನಜೀರ್, ಅಮಿರ್ ಜಾಕಿರ್, ಮುಶೀರ್, ಬ್ಯಾರಿ ಅಸೋಸಿಯೇಷನ್ ಅಧ್ಯಕ್ಷ ಶಮ್ಸುದ್ದಿನ್ ಭಾಗವಹಿಸಿದ್ದರು.
ಅಕ್ಬರ್ ಅಲಿ ಅವರೊಂದಿಗೆ ನಡೆದ ಸಂವಾದದಲ್ಲಿ ಬಿಬಿಎಂಪಿ ಯೋಜನಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುನಿಸ್ವಾಮಿ, ಉದ್ಯಮಿ ರಮೇಶ್ ಗೌಡ, ಜಗ ಮೆಚ್ಚಿದ ಮಗ ಡಾ.ರಾಜ್ ಕುಮಾರ್ ಸಂಘದ ಶೇಭೋ, ರಾಧಾಕೃಷ್ಣ, ಮುಖಂಡರಾದ ಕಿರಣ್, ಕಾರ್ತಿಕ್ ಪಾಲ್ಗೊಂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.