ADVERTISEMENT

ಪೊಲೀಸರು ವಾಹನಕ್ಕೆ ಏಕಾಏಕಿ ಅಡ್ಡ ಬಂದು ದಾಖಲೆ ಕೇಳುವಂತಿಲ್ಲ: ಬೊಮ್ಮಾಯಿ

ಪೊಲೀಸ್ ಠಾಣೆಗಳ ವ್ಯಾಪ್ತಿ ಮರುರಚನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 5:28 IST
Last Updated 5 ಮಾರ್ಚ್ 2021, 5:28 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯನ್ನು ಶೀಘ್ರವೇ ಮರು ರಚಿಸಲಾಗುವುದು’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಚ್.ಎಂ.ರಮೇಶ್‍ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಸಂಬಂಧ ಪೊಲೀಸ್‌ ಕಮಿಷನರ್‌ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶೀಘ್ರದಲ್ಲಿಯೇ ಸಮಿತಿಯಿಂದ ವರದಿ ಬರಲಿದ್ದು, ಪೊಲೀಸ್‌ ಠಾಣೆಗಳ ಗಡಿ ಪುನರ್‌ರಚಿಸಲಾಗುವುದು’ ಎಂದರು.

ದಕ್ಷಿಣ ವಲಯ ರಚನೆಯಿಲ್ಲ: ‘ಸದ್ಯ, ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪೂರ್ವ, ಪಶ್ಚಿಮ ಮತ್ತು ಉತ್ತರ ವಲಯ ಇವೆ. ಹೊಸದಾಗಿ, ನಾಲ್ಕನೇ ವಲಯ ಅಥವಾ ದಕ್ಷಿಣ ವಲಯ ರಚಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ’ ಎಂದು ಅವರು ಹೇಳಿದರು.

ADVERTISEMENT

ಅಪಘಾತಕ್ಕೆ ಅವಕಾಶ ಬೇಡ: ‘ಸಿಸಿಟಿವಿ ಕ್ಯಾಮೆರಾ ಇಲ್ಲದ ಕಡೆಗಳಲ್ಲಿ ಸಿಗ್ನಲ್ ಜಂಪ್, ಅತಿ ವೇಗ ವಾಹನಗಳನ್ನು ಪತ್ತೆಹಚ್ಚಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ವಾಹನ ಮತ್ತು ಸವಾರರನ್ನು ಹಿಡಿಯಲು ಪೊಲೀಸರು ರಸ್ತೆಯಲ್ಲಿ ಅಡ್ಡಬರುವುದು ಗಮನಕ್ಕೆ ಬಂದಿದೆ. ಅಂತಹ ಸಂದರ್ಭದಲ್ಲಿ ಅಪಘಾತವಾಗದಂತೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಮಾನುಸಾರ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ’ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.