ADVERTISEMENT

ಕೆಎಸ್‌ಎಲ್‌ಎಸ್‌ಎ ಮುಂದೆ ಆಸ್ಪತ್ರೆಗಳ ಸಮಸ್ಯೆ ಅನಾವರಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 20:21 IST
Last Updated 8 ನವೆಂಬರ್ 2022, 20:21 IST
ಬೌರಿಂಗ್‌ ಆಸ್ಪತ್ರೆ
ಬೌರಿಂಗ್‌ ಆಸ್ಪತ್ರೆ   

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನಗರದ ಬೌರಿಂಗ್‌ ಅಂಡ್ ಲೇಡಿ ಕರ್ಜನ್‌ ಹಾಗೂ ಕೆ.ಸಿ.ಜನರಲ್‌ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿದ್ದಾಗ, ಹಲವು ಸಮಸ್ಯೆಗಳು ಅನಾವರಣಗೊಂಡಿದ್ದವು.

750 ಹಾಸಿಗೆಗಳ ಸಾಮರ್ಥ್ಯವಿರುವ ಬೌರಿಂಗ್ ಆಸ್ಪತ್ರೆಯಲ್ಲಿ 30 ಹಾಸಿಗೆಗಳಲ್ಲಷ್ಟೇ ರೋಗಿಗಳು ಇದ್ದರು. ಹೆಚ್ಚಿನ ಸಂಖ್ಯೆಯ ವೈದ್ಯರು ಗೈರುಹಾಜರಾಗಿದ್ದರು. ಸಿಬ್ಬಂದಿ ಕೊರತೆಯೂ ಎದ್ದು ಕಾಣುತ್ತಿತ್ತು. ರೋಗಿಗಳಿಗೆ ಅಗತ್ಯ ಸೌಕರ್ಯಗಳಿರಲಿಲ್ಲ ಎಂದು ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೌರಿಂಗ್ ಆಸ್ಪತ್ರೆಯ ವಾರ್ಡ್‌ಗಳು, ಹೊರ ರೋಗಿಗಳ ವಿಭಾಗದಲ್ಲಿ ಸ್ವಚ್ಛತೆಯ ಕೊರತೆ ಇತ್ತು. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಉಪಕರಣಗಳು ಹಾಳಾಗಿದ್ದವು.

ADVERTISEMENT

ಕೆ.ಸಿ. ಜನರಲ್ ಆಸ್ಪತ್ರೆಯ ಹಾಸಿಗೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದವು. ರೋಗಿಯೊಬ್ಬರನ್ನು ಸೋರುತ್ತಿರುವ ಕಿಟಕಿಯ ಪಕ್ಕದ ಹಾಸಿಗೆಯ ಮೇಲೆ ಮಲಗಿಸಿರುವ ದೃಶ್ಯ ಕಂಡುಬಂತು. ತಕ್ಷಣ ಅವರನ್ನು ಬೇರೆಡೆ ಸ್ಥಳಾಂತರಿಸುವಂತೆ ನ್ಯಾಯಮೂರ್ತಿ ವೀರಪ್ಪ ಸೂಚಿಸಿದ್ದರು.

‘ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಪ್ರಮುಖವಾಗಿ ಕಾಣುತ್ತಿದೆ. ಆಡಳಿತ ವೈದ್ಯಾಧಿಕಾರಿ ನೀಡಿದ ಮಾಹಿತಿಯಂತೆಬೌರಿಂಗ್ ಆಸ್ಪತ್ರೆಗೆ ಮಂಜೂರಾದ 585 ಹುದ್ದೆಗಳಲ್ಲಿ 183 ಭರ್ತಿಯಾಗಿವೆ.ಕೆ.ಸಿ. ಜನರಲ್ ಆಸ್ಪತ್ರೆಯ 360 ಹುದ್ದೆಗಳಲ್ಲಿ 233 ಸಿಬ್ಬಂದಿ ಇದ್ದಾರೆ. ಗ್ರೂಪ್‌ ‘ಡಿ’ ನೌಕರರ ಕೊರತೆಯೂ ಇದ್ದು, ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದಾರೆ’ ಎಂದು ಕೆಎಸ್‌ಎಲ್‌ಎಸ್‌ಎ ಪ್ರೊ.ವಿಘ್ನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ಪ್ರಾಧಿಕಾರದ ಮುಂದೆ ಮತ್ತಷ್ಟು ಸಮಸ್ಯೆಗಳನ್ನು ತೆರೆದಿಟ್ಟರು. ಭೇಟಿ ವೇಳೆ ಕಂಡುಬಂದ ಸ್ಥಿತಿಗತಿಯ ವರದಿಯನ್ನು ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.