
ದೇವನಹಳ್ಳಿ: ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟದ ಬಳಿಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್ನಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ವಿಮಾನ ನಿಲ್ದಾಣದ ಭದ್ರತಾ ಹೊಣೆ ಹೊತ್ತಿರುವ ಕೇಂದ್ರ ಕೈಗಾರಿಕ ಭದ್ರತಾ ಪಡೆಯ(ಸಿಐಎಸ್ಎಫ್) ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ರಾಜ್ಯ ಪೊಲೀಸರು ವಿಮಾನ ನಿಲ್ದಾಣದ ಸುತ್ತಮುತ್ತ ಅಹಿತಕರ ಘಟನೆ ನಡೆಯದಂತೆ ಕಣ್ಣಿಟ್ಟಿದ್ದಾರೆ. ಪ್ರತಿ ಅರ್ಧ ತಾಸಿಗೊಮ್ಮೆ ಶ್ವಾನದಳದಿಂದ ಯಾವ ಮೂಲೆ ಬಿಡದಂತೆ ತಪಾಸಣೆ ಮಾಡಲಾಗುತ್ತಿದೆ.
ಟರ್ಮಿನಲ್ಗಳಲ್ಲಿ ಅನಾಮಧೇಯ ವಸ್ತುಗಳು ಕಂಡು ಬಂದರೆ ಕೂಡಲೇ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ ಮಾಡಲಾಗುತ್ತಿದೆ. ಚೆಕ್ ಪೋಸ್ಟ್ಗಳ ಸಂಖ್ಯೆ ಹೆಚ್ಚಿಸಲಾಗಿದೆ.
ಸಿಸಿಟಿವಿ ಕ್ಯಾಮೆರಾ ಮೂಲಕ ನಿರಂತರ ನಿಗಾ ವಹಿಸಲು ಕಂಟ್ರೋಲ್ ರೂಂ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕರನ್ನು ಬೀಳ್ಕೊಡಲು ಬರುವ, ಇಲ್ಲವೇ ಸ್ವಾಗತಿಸಲು ಬರುವವರನ್ನು ಹೆಚ್ಚು ಹೊತ್ತು ಟರ್ಮಿನಲ್ಗಳಲ್ಲಿ ನಿಲ್ಲದಂತೆ ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ.
ಪ್ರಯಾಣಿಕರನ್ನು ಬಿಡಲು ಇಲ್ಲವೇ ಕರೆದೊಯ್ಯಲು ಬರುವ ಟ್ಯಾಕ್ಸಿ ಹಾಗೂ ಖಾಸಗಿ ವಾಹನಗಳನ್ನು ನಿಲುಗಡೆ ಸ್ಥಳದಲ್ಲಿ ಐದು ನಿಮಿಷಕ್ಕೂ ಹೆಚ್ಚು ನಿಲ್ಲಲು ಅವಕಾಶ ನೀಡುತ್ತಿಲ್ಲ.
ಬಸ್ ನಿಲ್ದಾಣ, ವಾಹನ ನಿಲ್ದಾಣಗಳಲ್ಲಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ 24 ಗಂಟೆಯೂ ಗಸ್ತು ತಿರುಗುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.