ಕೆಂಗೇರಿ: ಕೋಟೆ ಶ್ರೀಸೋಮೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವ ಹಾಗೂ ಧಾರಾ ಮಹೋತ್ಸವ ಕೆಂಗೇರಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಸೋಮೇಶ್ವರ ಸ್ವಾಮಿ ಮತ್ತು ಪಾರ್ವತಿ ಅಮ್ಮನವರ ಉತ್ಸವಮೂರ್ತಿಗಳನ್ನಿರಿಸಿ ರಾಜಾ ಹೋಮ, ಪ್ರಧಾನ ಹೋಮ, ಸಪ್ತಪದಿ, ಆರುಂಧತಿ ಪೂಜೆ ಸೇರಿದಂತೆ ಕಲ್ಯಾಣೋತ್ಸವದ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ವಿದ್ಯುತ್ ದೀಪಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ದೇವಾಲಯದಲ್ಲಿ ಕಲ್ಯಾಣ ಸಡಗರ ಕಳೆಗಟ್ಟಿತ್ತು. ಕಲ್ಯಾಣೋತ್ಸವದ ನಿಮಿತ್ತ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಕೆಂಗೇರಿ ಯಲ್ಲಮ್ಮ ದೇವಾಲಯದಿಂದ ತಂಬಿಟ್ಟಿನ ಆರತಿಯನ್ನು ಮೆರವಣಿಗೆ ಮೂಲಕ ಕೋಟೆ ಸೋಮೇಶ್ವರ ದೇವಾಲಯಕ್ಕೆ ತಂದು ಪೂಜೆ ನೆರವೇರಿಸಿದರು.
ಬುಧವಾರದಿಂದಲೇ ಆರಂಭವಾಗಿದ್ದ ಪೂಜಾ ಕೈಂಕರ್ಯದ ಭಾಗವಾಗಿ ಸೋಮೇಶ್ವರ ದೇವಾಲಯ ಆವರಣದಲ್ಲಿ 1400 ಕ್ಕೂ ಮುತ್ತೈದೆಯರಿಗೆ ಬಳೆ ತೊಡಿಸಲಾಯಿತು. ಕಲ್ಯಾಣೋತ್ಸವದ ಬಳಿಕ ಸಂಜೆ ಕೆಂಗೇರಿಯ ಪ್ರಮುಖ ರಾಜಬೀದಿಯಲ್ಲಿ ಸಂಚರಿಸಿದ ಗಿರಿಜಾ ಕಲ್ಯಾಣೋತ್ಸವ ರಥಕ್ಕೆ ನಮಿಸುವ ಮೂಲಕ ಸಾವಿರಾರು ಭಕ್ತರು ಭಕ್ತಿ ಭಾವ ಮೆರೆದರು.
ಶಾಸಕ ಎಸ್.ಟಿ.ಸೋಮಶೇಖರ್, ಕ್ಷೇತ್ರದ 17 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಬಿಬಿಎಂಪಿ ವಾರ್ಡ್ ಅಧ್ಯಕ್ಷರು, ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.