ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ವಿಶ್ರಾಂತಿ ಕೊಠಡಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಇದೆ’ ಎಂಬುದಾಗಿ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಪೋಸ್ಟ್ ಪ್ರಕಟಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಬಾಂಬ್ ನಿಷ್ಕ್ರಿಯ ದಳದೊಂದಿಗೆ ಕೊಠಡಿಗೆ ತೆರಳಿದ್ದ ಭದ್ರತಾ ಸಿಬ್ಬಂದಿ, ಬ್ಯಾಗ್ ಪರಿಶೀಲನೆ ನಡೆಸಿದರು. ಅದರಲ್ಲಿ ಬಟ್ಟೆಗಳು ಮಾತ್ರ ಇದ್ದವು. ‘ಇದೊಂದು ಹುಸಿ ಪೋಸ್ಟ್’ ಎಂದು ಭದ್ರತಾ ಸಿಬ್ಬಂದಿ ಹೇಳಿದ ನಂತರವೇ ಆತಂಕ ದೂರವಾಯಿತು.
ಆಗಿದ್ದೇನು: ‘ಬೆಳಿಗ್ಗೆ 8.30ರ ಸುಮಾರಿಗೆ ಪ್ರಯಾಣಿಕರೊಬ್ಬರು ವಿಶ್ರಾಂತಿ ಕೊಠಡಿಗೆ ಬಂದಿದ್ದರು. ಕುರ್ಚಿ ಮೇಲೆ ಬ್ಯಾಗ್ ಇಟ್ಟು ಶೌಚಾಲಯಕ್ಕೆ ಹೋಗಿದ್ದರು. ಅರ್ಧ ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಕೊಠಡಿಗೆ ಬಂದಿದ್ದ ಪ್ರಯಾಣಿಕನೊಬ್ಬ, ಬ್ಯಾಗ್ ಯಾರದ್ದು ಎಂದು ವಿಚಾರಿಸಿದ್ದ. ಯಾರೊಬ್ಬರೂ ಪ್ರತಿಕ್ರಿಯಿಸಿರಲಿಲ್ಲ’ ಎಂದು ಪೊಲೀಸರು ಹೇಳಿದರು.
‘ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದ ಭದ್ರತಾ ಸಿಬ್ಬಂದಿ, ಬ್ಯಾಗ್ನ್ನು ಠಾಣೆಗೆ ತಂದುಕೊಟ್ಟಿದ್ದರು. ಅದರ ಮಾಲೀಕ ಸಹ ಬ್ಯಾಗ್ ಕಳುವಾಗಿರುವುದಾಗಿ ದೂರು ನೀಡಲು ಬಂದಿದ್ದರು. ಅವರಿಗೆ ಎಚ್ಚರಿಕೆ ನೀಡಿ ಬ್ಯಾಗ್ ಕೊಟ್ಟು ಕಳುಹಿಸಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.