ಬೆಂಗಳೂರು: ನೆರೆ ಸಂತ್ರಸ್ತರ ನೆರವಿಗೆ ಧಾವಿಸಿರುವ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ (ಕೆಎಂಎಫ್), ಒಟ್ಟು ₹ 1.21 ಕೋಟಿ ಮೊತ್ತದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ.
ಅಲ್ಲದೆ, ಕೆಎಂಎಫ್ ನೌಕರರು ತಮ್ಮ ಒಂದು ದಿನದ ವೇತನವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.
ಕೆಎಂಎಫ್ ಮತ್ತು ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳಾದ ಕೋಲಾರ- ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ವಿಜಯಪುರ, ಶಿವಮೊಗ್ಗ ಮತ್ತು ಧಾರವಾಡ ಹಾಲು ಒಕ್ಕೂಟಗಳು ಒಟ್ಟಾರೆಯಾಗಿ 50 ಟನ್ ನಂದಿನಿ ಪಶು ಆಹಾರ, 35, ಸಾವಿರ ಲೀಟರ್ ನಂದಿನಿ ಹಾಲು, 2 ಸಾವಿರ ಲೀಟರ್ ಹಾಲಿನ ಉತ್ಪನ್ನಗಳು, 15 ಸಾವಿರ ಲೀಟರ್ ಕುಡಿಯುವ ನೀರು, 1, 200 ಕೆ.ಜಿ. ಸಿಹಿ ತಿನಿಸುಗಳು, 650 ಹೊದಿಕೆಗಳನ್ನು ಸಂತ್ರಸ್ತರಿಗೆ ನೀಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಮವಾರ ₹ 1 ಕೋಟಿ ಮೊತ್ತದ ಚೆಕ್ ಹಸ್ತಾಂತರಿಸುವ ಮೂಲಕ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಕೆಎಂಎಫ್ ದೇಣಿಗೆ ನೀಡಿದೆ. ಇದೇ ಸಂದರ್ಭದಲ್ಲಿ ನಂದಿನಿ ನೂತನ ಉತ್ಪನ್ನಗಳಾದ ಸಿರಿಧಾನ್ಯ ಲಡ್ಡು, ಸಿರಿ ಧಾನ್ಯ ಹಾಲಿನ ಪುಡಿ ಮತ್ತು 100 ಗ್ರಾಂ ನೂತನ ಪ್ಯಾಕ್ನಲ್ಲಿ ನಂದಿನಿ ಜಾಮೂನ್ ಮತ್ತು ರಸಗುಲ್ಲ ಉತ್ಪನ್ನಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.