ADVERTISEMENT

ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವ ಆಮಿಷ: ₹50 ಲಕ್ಷ ವಂಚನೆ

ಇಬ್ಬರು ಆರೋಪಿಗಳ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್ಐಆರ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 14:46 IST
Last Updated 8 ಜನವರಿ 2026, 14:46 IST
   

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದಲ್ಲಿ(ಕೆಎಂಎಫ್‌) ಕೆಲಸ ಕೊಡಿಸುವುದಾಗಿ ನಂಬಿಸಿ 10 ಮಂದಿಯಿಂದ ₹50 ಲಕ್ಷ ಪಡೆದು ವಂಚಿಸಿರುವ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆರೋಪಿಗಳಾದ ಎನ್‌.ಕೃಷ್ಣನ್‌, ನಾಗರಾಜ್‌ ಅವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ. ಆರ್.ಟಿ.ನಗರದ ನಿವಾಸಿ ಕರೀಗೌಡ ಪಾಟೀಲ ಅವರು ನೀಡಿರುವ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ಗಳಾದ 316(2), 3(5) ಅಡಿ ಮಂಗಳವಾರ ಪ್ರಕರಣ ದಾಖಲಾಗಿದೆ.

‘2022ರಲ್ಲಿ ಮಲ್ಲೇಶ್ವರ ಪಾಕಶಾಲಾ ಹೋಟೆಲ್‌ನಲ್ಲಿ ಗೋಪಿ ಎಂಬುವವರು ಎನ್‌.ಕೃಷ್ಣನ್‌ ಅವರನ್ನು ಪರಿಚಯಿಸಿದ್ದರು. ಕೃಷ್ಣನ್‌ ಅವರು ತಾನು ಕೆಎಎಸ್ ಅಧಿಕಾರಿಯಾಗಿದ್ದು, ಕೆಎಂಎಫ್‌ನಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಆರೋಪಿ ನಾಗರಾಜ್‌ ಸಹ, ತಾನು ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿ ನಕಲಿ ಗುರುತಿನಚೀಟಿ ತೋರಿಸಿದ್ದರು. ಕೆಎಂಎಫ್‌ನಲ್ಲಿ 25 ಸರ್ಕಾರಿ ಹುದ್ದೆಗಳಿದ್ದು, ಉದ್ಯೋಗಿಗಳ ಆಯ್ಕೆ ಅಧಿಕಾರ ನಮಗಿದೆ. ಆಯ್ಕೆ ಮಾಡಲು ಪರೀಕ್ಷೆ ಅಥವಾ ಸಂದರ್ಶನದ ಅಗತ್ಯ ಇಲ್ಲ. ಪ್ರತಿ ಅಭ್ಯರ್ಥಿ ₹10 ಲಕ್ಷ ಸರ್ಕಾರಿ ಶುಲ್ಕ ಪಾವತಿಸಿದರೆ ಮೂರು ತಿಂಗಳಲ್ಲಿ ನೇಮಕಾತಿ ಪತ್ರ ನೀಡಲಾಗುವುದು ಎಂಬುದಾಗಿ ನಂಬಿಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಅಭ್ಯರ್ಥಿಗಳಾದ ವಿಜಯೇಂದ್ರ ಎಸ್. ಪಾಟೀಲ, ಜಿ.ಡಿ.ಮಧು, ಎಸ್‌.ಅನಿತಾ, ಪಿ.ಸೂರಜ್‌, ಎಂ.ಅಕ್ಷಯ್‌ ನಾಯಕ್‌ ಸೇರಿದಂತೆ 10 ಅಭ್ಯರ್ಥಿಗಳ ಜತೆಗೆ ಆರೋಪಿಗಳು ಮಾತುಕತೆ ನಡೆಸಿದ್ದರು. 2022ರ ಡಿಸೆಂಬರ್‌ನಿಂದ 2023ರ ಡಿಸೆಂಬರ್‌ ವರೆಗೆ ಬ್ಯಾಂಕ್‌ ವರ್ಗಾವಣೆಯ ಮೂಲಕ ₹36 ಲಕ್ಷ ಹಾಗೂ ನಗದು ರೂಪದಲ್ಲಿ ₹14 ಲಕ್ಷವನ್ನು ಆರೋಪಿಗಳಿಗೆ ನೀಡಲಾಗಿತ್ತು. 2024ರ ಮಾರ್ಚ್‌ನಲ್ಲಿ ಅಭ್ಯರ್ಥಿಗಳು ಹಾಗೂ ಆರೋಪಿಗಳು ಒಪ್ಪಂದದ ಪತ್ರ ಮಾಡಿಕೊಂಡಿದ್ದರು.

ಹಣ ಪಾವತಿಸಿದ ವಿವರ ಹಾಗೂ ಕೆಲಸ ಸಿಗದಿದ್ದರೆ ಹಣವನ್ನು ವಾಪಸ್ ಕೊಡುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೇ ಆರೋಪಿಗಳು, ಅಭ್ಯರ್ಥಿಗಳಿಗೆ ಚೆಕ್‌ ಸಹ ನೀಡಿದ್ದರು. ಕೆಲವು ದಿನಗಳು ಕಳೆದ ಮೇಲೆ ಮೈಸೂರಿನಲ್ಲಿ ಸಂದರ್ಶನ ನಡೆಯಲಿದೆ ಎಂದು ಅಭ್ಯರ್ಥಿಗಳಿಗೆ ಇ–ಮೇಲ್‌ ಮೂಲಕ ಸಂದೇಶ ಕಳಹಿಸಲಾಗಿತ್ತು. ಅದಾದ ಮೇಲೆ ಕೆಲಸವನ್ನು ನೀಡಿಲ್ಲ’ ಎಂದು ದೂರು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.