
ಬೆಂಗಳೂರು: ‘ಕೋಗಿಲು ಬಡಾವಣೆಯಲ್ಲಿ ಅತಿಹೆಚ್ಚು ಒತ್ತುವರಿಯಾಗಿರುವುದು 2021ರಲ್ಲಿ. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಹಾಗಾದರೆ ಇದನ್ನು ಬಿಜೆಪಿ ಪ್ರಾಯೋಜಿತ ಒತ್ತುವರಿ ಎಂಬುದಾಗಿ ಕರೆಯಬೇಕೇ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಳ್ಳನ್ನು ಸತ್ಯ ಮಾಡುವುದನ್ನಷ್ಟೇ ಬಿಜೆಪಿ ನಾಯಕರು ಕರಗತ ಮಾಡಿಕೊಂಡಿದ್ದಾರೆ. ಅವರ ಮಾತಿಗೆ ತಲೆ ಬುಡ ಇಲ್ಲ. ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವಾಲಯ ನಾಲಾಯಕ್ ಎಂದು ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆಯೇ’ ಎಂದು ವ್ಯಂಗ್ಯವಾಡಿದರು.
‘ನಾವು ಒತ್ತುವರಿಗೆ ಬೆಂಬಲ ನೀಡಿದ್ದರೆ ತೆರವಿಗೆ ಮುಂದಾಗುತ್ತಿರಲಿಲ್ಲ. ಎರಡು ತಿಂಗಳ ಹಿಂದೆಯೇ ಬಡಾವಣೆಯಲ್ಲಿ 10 ಅನಧಿಕೃತ ಮನೆಗಳನ್ನು ತೆರವು ಮಾಡಿಸಿ, ಬೇರೆಯವರಿಗೂ ಖಾಲಿ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ, ಇದಕ್ಕೆ ಯಾರೂ ಕಿವಿಗೊಡಲಿಲ್ಲ. ಇನ್ನೂ ಹಲವರು ಬಂದು ಸೇರಿಕೊಂಡರು. ಅನಿವಾರ್ಯವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕೆಲವರು ನನ್ನ ವಿರುದ್ದ, ಇದನ್ನು ರಾಜಕೀಯ ಅಸ್ತ್ರ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಜಗ್ಗುವುದಿಲ್ಲ. ನನ್ನ ಒಳ್ಳೆಯ ಕೆಲಸ ಮುಂದುವರಿಸುವೆ’ ಎಂದು ಸ್ಪಷ್ಟಪಡಿಸಿದರು.
‘ಅಧಿಕಾರಿಗಳ ಜಂಟಿ ತಂಡಗಳಿಂದ ಅಲ್ಲಿ ನೆಲೆಸಿರುವವರ ಸಮೀಕ್ಷೆ ಮುಗಿದಿದೆ. ಪೊಲೀಸರೂ ತನಿಖೆ ನಡೆಸುತ್ತಿದ್ದಾರೆ. ವರದಿ ಬಂದ ನಂತರ ಅರ್ಹರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಅವರು ಮಾನವೀಯ ನೆಲೆಯಲ್ಲಿ ಇದನ್ನು ನೋಡಿದ್ದಾರೆ. ಅರ್ಹರಿಗೆ ಕಾನೂನು ಬದ್ದವಾಗಿ ಪರ್ಯಾಯ ನೆಲೆ ಒದಗಿಸಲಾಗುತ್ತಿದೆ. ಇದರಲ್ಲಿ ನಾವು ರಾಜಕೀಯ ಮಾಡುವುದು ಏನಿದೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.
‘ಇನ್ಪೊಸಿಸ್ಗೆ ನೀಡಿದ ಭೂಮಿ ಮಾರಾಟ ಮಾಡಲಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಬೆಂಗಳೂರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.