ಬೆಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು (ಕೆಎಸ್ಸಿಎಸ್ಟಿ) 2022 ಮತ್ತು 2023ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗೆ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಿಂದ ಅರ್ಜಿ ಆಹ್ವಾನಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಇಬ್ಬರು ಸಾಧಕರಿಗೆ ನೀಡುವ ‘ಸರ್.ಎಂ.ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿ’ಯು ತಲಾ ₹2 ಲಕ್ಷ ನಗದು, ನೆನಪಿನ ಕಾಣಿಕೆ ಒಳಗೊಂಡಿದೆ. ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
₹1.50 ಲಕ್ಷ ನಗದು ಒಳಗೊಂಡಿರುವ ‘ರಾಜಾ ರಾಮಣ್ಣ ಪ್ರಶಸ್ತಿ’ಯನ್ನು ಇಬ್ಬರಿಗೆ ನೀಡಲಾಗುತ್ತದೆ. ಐದು ವಿಜ್ಞಾನಿಗಳಿಗೆ ‘ಸರ್.ಸಿ.ವಿ.ರಾಮನ್ ವಿಜ್ಞಾನಿ ಪ್ರಶಸ್ತಿ’, ನಾಲ್ಕು ಎಂಜಿನಿಯರ್ಗಳಿಗೆ ‘ಸತೀಶ್ ಧವನ್ ಎಂಜಿನಿಯರ್ ಪ್ರಶಸ್ತಿ’, ಇಬ್ಬರು ಮಹಿಳಾ ಸಾಧಕರಿಗೆ ‘ಕಲ್ಪನಾ ಚಾವ್ಲಾ ಮಹಿಳಾ ವಿಜ್ಞಾನಿ–ಎಂಜಿನಿಯರ್ ಪ್ರಶಸ್ತಿ’ ನೀಡಲಾಗುತ್ತದೆ. ಈ ಮೂರು ಪ್ರಶಸ್ತಿಗಳು ತಲಾ ₹1 ಲಕ್ಷ ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿಪತ್ರ ಒಳಗೊಂಡಿವೆ.
ಅರ್ಜಿ ಸಲ್ಲಿಕೆಗೆ ಆ.21 ಕೊನೆ ದಿನ. ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆವರಣ, ಬೆಂಗಳೂರು–560012 ಈ ವಿಳಾಸಕ್ಕೆ ಕಳುಹಿಸಬೇಕು. ವಿವರಗಳಿಗೆ ಮಂಡಳಿಯ ವೆಬ್ಸೈಟ್ www.kscst.org.in ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕ ಸಂಖ್ಯೆ: 080–23341652 ಅಥವಾ 23348848
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.