ADVERTISEMENT

ಕ್ರೀಡೋತ್ಸಾಹ ಹೆಚ್ಚಿಸಿದ ಪೊಲೀಸ್ ಓಟ: 12 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 19:54 IST
Last Updated 1 ಮಾರ್ಚ್ 2026, 19:54 IST
ರಾಜ್ಯ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಓಟದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು  ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ರಾಜ್ಯ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಓಟದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು  ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಬೆಂಗಳೂರು: ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಓಟದಲ್ಲಿ(ಕೆಎಸ್‌ಪಿ ರನ್) 12 ಸಾವಿರಕ್ಕೂ ಹೆಚ್ಚು ಕ್ರೀಡಾಪ್ರಿಯರು ಪಾಲ್ಗೊಂಡು ಭಾನುವಾರದ ಮುಂಜಾನೆಯ ಸೊಬಗನ್ನು ಹೆಚ್ಚಿಸಿದರು.

‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ‌ ಆಯೋಜಿಸಿದ್ದ ಸ್ಪರ್ಧೆಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ವಿಧಾನಸೌಧದ ಮೆಟ್ಟಿಲು ಬಳಿ ಹಸಿರು ನಿಶಾನೆ ತೋರಿದರು. 5 ಕಿ.ಮೀ ಹಾಗೂ 10 ಕಿ.ಮೀ. ಓಟವು ಜನರನ್ನು ಆಕರ್ಷಿಸಿತು. ಜತೆಗೆ ಪೊಲೀಸ್ ಬ್ಯಾಂಡ್‌ ಗಮನ ಸೆಳೆಯಿತು.

ಹಸಿರು ಬೆಂಗಳೂರು’, ‘ಡ್ರಗ್ಸ್ ಮುಕ್ತ ಕರ್ನಾಟಕ’, ‘ಸೈಬರ್ ಅಪರಾಧ’ ಕುರಿತು ಜಾಗೃತಿ ಮೂಡಿಸಲಾಯಿತು. ಪೊಲೀಸರು, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಿಬ್ಬಂದಿ, ವೃತ್ತಿಪರ ಓಟಗಾರರು, ಹಿರಿಯ ನಾಗರಿಕರು ಓಟದಲ್ಲಿ ಪಾಲ್ಗೊಂಡಿದ್ದರು. ಹಿರಿಯರ ಜತೆ ಮಕ್ಕಳು ಸಹ ಹೆಜ್ಜೆ ಹಾಕಿದರು. ಸ್ಪರ್ಧಿಗಳಿಗೆ ಓಟದ ಮಧ್ಯೆ ನೀರು, ಬಿಸ್ಕತ್‌ ನೀಡಲಾಯಿತು. 

ADVERTISEMENT

ಸ್ಪರ್ಧೆಯಲ್ಲಿ ಮೂರು ಸಾವಿರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದು ವಿಶೇಷ. ಸ್ಪರ್ಧೆಯಲ್ಲಿ ಹಿರಿಯರು ಹಾಗೂ ಅಂಗವಿಕಲರು ಗಮನಸೆಳೆದರು. ಓಟದಲ್ಲಿ ಬೆವರು ಹರಿಸಿದವರು, ಜಿಂಕೆಯಂತೆ ಓಡಿದವರು, ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳು ಪ್ರಮಾಣಪತ್ರ ಹಾಗೂ ಪದಕದೊಂದಿಗೆ ಸಂಭ್ರಮಿಸಿದರು.

ಬೆಳಿಗ್ಗೆ 7.30ಕ್ಕೆ 5 ಕಿ.ಮೀ. ಹಾಗೂ 6.30 ಕ್ಕೆ 10 ಕಿ.ಮೀ. ಓಟ ಆರಂಭಗೊಂಡಿತು. ಎರಡೂ ಓಟಗಳು ವಿಧಾನಸೌಧದಿಂದ ಆರಂಭವಾಗಿ, ಕಬ್ಬನ್‌ ಪಾರ್ಕ್‌ನಲ್ಲಿ ಸಂಚರಿಸಿ, ವಿಧಾನಸೌಧದಲ್ಲಿ ಮುಕ್ತಾಯಗೊಂಡವು. ಪೊಲೀಸ್‌, ಎಸ್‌ಬಿಐ ಹಾಗೂ ಮುಕ್ತ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪ್ರತಿಯೊಬ್ಬ ಸ್ಪರ್ಧಿಗೂ ಟೀ ಶರ್ಟ್ ನೀಡಲಾಯಿತು. ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

10 ಕಿ.ಮೀ. ಓಟದ ಸ್ಪರ್ಧೆ ಅನುಭವಿ ಓಟಗಾರರು ಹಾಗೂ 5 ಕಿ.ಮೀ. ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಎರಡು ವಿಭಾಗಗಳಿಂದ ವಿಜೇತರಿಗೆ ₹18 ಲಕ್ಷ ನಗದು ಬಹುಮಾನ ನೀಡಲಾಯಿತು. ಭಾನುವಾರ ಏಕಕಾಲಕ್ಕೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಓಟ ನಡೆಯಿತು. ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಜಿಬಿಎ ಆಯುಕ್ತ ಮಹೇಶ್ವರ ರಾವ್, ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್, ಎಸ್‌ಬಿಐ ಬೆಂಗಳೂರು ವಲಯ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ, ಡಿಜಿಪಿಗಳಾದ ಪ್ರಣವ್ ಮೊಹಂತಿ, ಉಮೇಶ್ ಕುಮಾರ್, ಅರುಣ್ ಚಕ್ರವರ್ತಿ, ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯ, ಆಡಳಿತ ವಿಭಾಗ ಎಡಿಜಿಪಿ ಸೌಮೆಂದು ಮುಖರ್ಜಿ, ಗುಪ್ತ ವಾರ್ತೆ ಎಡಿಜಿಪಿ ಎಸ್‌.ರವಿ, ಕೆಎಸ್‌ಆರ್‌ಪಿ (ಪ್ರಭಾರ) ಎಡಿಜಿಪಿ ಸಂದೀಪ್ ಪಾಟೀಲ್, ಎನ್ಇಬಿ ಸಂಸ್ಥೆ ಮುಖ್ಯಸ್ಥ ನಾಗರಾಜ ಅಡಿಗ ಹಾಜರಿದ್ದರು.

ವಿಜೇತರ ವಿವರ

  • 10 ಕಿ.ಮೀ. ಓಟ

ಮಹಿಳಾ ವಿಭಾಗ: ಅಂಜು ಕುರೈ (35 ನಿಮಿಷ 29 ಸೆಕೆಂಡು) ಬಾಬ್ಲಿ ವರ್ಮಾ (35 ನಿಮಿಷ 33 ಸೆಕೆಂಡು) ಯಶಿ ಸಾಚನ್ (36 ನಿಮಿಷ 49 ಸೆಕೆಂಡು)

ಪುರುಷರ ವಿಭಾಗ: ಶಿವಾಜಿ ಪರಶುರಾಮಮಾದಪ್ಪಗೌಡರ (29 ನಿಮಿಷ 24 ಸೆಕೆಂಡು) ಹರೀಶ್‌ (29 ನಿಮಿಷ 29 ಸೆಕೆಂಡು) ನವರತನ್ (29 ನಿಮಿಷ 32ಸೆಕೆಂಡು)

  • 5 ಕಿ.ಮೀ. ಓಟ

ಪುರುಷರ ವಿಭಾಗ: ಶಾರುಖ್ ಖಾನ್ (14 ನಿಮಿಷ 51 ಸೆಕೆಂಡು) ಲೋಕೇಶ್ ಚೌಧರಿ (14 ನಿಮಿಷ 55 ಸಕೆಂಡು) ನಿಖಿಲ್ ಬಾಲ್ವಿ (15 ನಿಮಿಷ 21 ಸೆಕೆಂಡು)

ಮಹಿಳಾ ವಿಭಾಗ: ಮಿಥಾಲಿ ಬೋಯಾರ್‌ (17 ನಿಮಿಷ 11ಸೆಕೆಂಡು) ಆರಾಧನಾ (17 ನಿಮಿಷ 12ಸೆಕೆಂಡು) ಸಿ.ಬಬಿತಾ (17 ನಿಮಿಷ 59 ಸೆಕೆಂಡು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.