
ಕನಕದಾಸ ಮೂರ್ತಿ
ಕೆ.ಆರ್.ಪುರ: ಕುರುಬ ಸಮಾಜದ ಪ್ರಗತಿಗಾಗಿ ಗಾಂಧಿನಗರದಲ್ಲಿ ಸುಮಾರು ₹35 ಕೋಟಿ ವೆಚ್ಚದಲ್ಲಿ ಆರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನ.12 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಹೇಳಿದರು.
ಕೆ.ಆರ್.ಪುರ ಸಮೀಪದ ಬಾಬುಸಪಾಳ್ಯದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಕುರುಬ ಸಮಾಜದ ಶೈಕ್ಷಣಿಕ, ಅರ್ಥಿಕ, ವಾಣಿಜ್ಯ, ಸಂಘದ ಚಟುವಟಿಕೆಗಳ ಉದ್ದೇಶಕ್ಕಾಗಿ ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರು ಅಂತಸ್ತಿನ ಕಟ್ಟಡದಲ್ಲಿ ಎರಡು ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ, ಎರಡು ಅಂತಸ್ತಿನಲ್ಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ಸಂಘದ ನಿರ್ದೇಶಕ ಗುಂಜೂರು ರಾಮಕೃಷ್ಣಪ್ಪ, ‘ನೂರಾರು ವರ್ಷಗಳ ಇತಿಹಾಸವಿರುವ ಕುರುಬ ಸಮಾಜಕ್ಕೆ ವ್ಯವಸ್ಥಿತ ಕಟ್ಟಡವಿರಲಿಲ್ಲ. ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ಸುಸಜ್ಜಿತ ಕಟ್ಟಡ ಇದಾಗಲಿದೆ. ಪೂರ್ವ ತಾಲ್ಲೂಕಿನಲ್ಲಿ ಕಾಳಿದಾಸ ಸಹಕಾರಿ ಬ್ಯಾಂಕ್ ಆರಂಭಿಸುವ ಉದ್ದೇಶವಿದೆ. ನಿವೇಶನ ದೊರಕಿದ ನಂತರ ಕಟ್ಟಡ ನಿರ್ಮಾಣ ಮಾಡುವ ಜೊತೆಗೆ ಶಾಖೆ ಆರಂಭಗೊಳ್ಳಲಿದೆ’ ಎಂದರು.
ಸಂಘದ ಖಜಾಂಚಿ ಕೃಷ್ಣಮೂರ್ತಿ, ಸಂಘದ ಪೂರ್ವ ಜಿಲ್ಲಾ ಅಧ್ಯಕ್ಷ ಆಗರ ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ, ಬಾಬುಸಪಾಳ್ಯ ನರಸಿಂಹಮೂರ್ತಿ, ವರ್ತೂರು ಚಂದ್ರು, ರಾಜು, ರಮೇಶ್, ಚಂದ್ರಣ್ಣ, ದಿನ್ನೂರು ಶ್ರೀನಿವಾಸ್, ಮರಿಯಪ್ಪ, ಕೃಷ್ಣಪ್ಪ, ಯಮಲೂರು ಲೋಕೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.