
ಬೆಂಗಳೂರು: ‘ಕೇಂದ್ರೀಯ ವಿದ್ಯಾಲಯ ಶಿಕ್ಷಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ.
ಅಖಿಲ ಭಾರತ ಕೇಂದ್ರೀಯ ವಿದ್ಯಾಲಯ ಶಿಕ್ಷಕರ ಸಂಘಟನೆಯ (ಎಐಕೆವಿಟಿಎ) ರಾಷ್ಟ್ರೀಯ ಕಾರ್ಯದರ್ಶಿ ಕೆ.ಪಿ.ಸಿಂಗ್ ನೇತೃತ್ವದ ಶಿಕ್ಷಕರ ನಿಯೋಗ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಸಚಿವರು, ‘ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ಶಿಕ್ಷಣ ಸಚಿವಾಲಯದ ಪ್ರಮುಖ ಸಂಸ್ಥೆಯಾಗಿದೆ. ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ವಿಳಂಬ ಮಾಡುವುದಿಲ್ಲ. ಮುಖ್ಯವಾಗಿ ಮಾಡಿಫೈಡ್ ಅಶ್ಯೂರ್ಡ್ ಕೆರಿಯರ್ ಪ್ರೊಗ್ರೆಸ್ಸನ್(ಎಂಎಸಿಪಿ) ಜಾರಿ ಕುರಿತು ವಿಸ್ತೃತ ವರದಿ ನೀಡಿ’ ಎಂದು ಕೆವಿಎಸ್ ಆಯುಕ್ತ ವಿಕಾಸ್ ಗುಪ್ತ ಅವರಿಗೆ ಸೂಚನೆ ನೀಡಿದರು.
‘ಕೆವಿಎಸ್ ಶಿಕ್ಷಕರು 12 ವರ್ಷ ಸೇವೆ ಸಲ್ಲಿಸಿದ ನಂತರ ಹಿರಿಯ ಶ್ರೇಣಿ ವೇತನ ಹಾಗೂ 24 ವರ್ಷದ ಬಳಿಕ ಆಯ್ಕೆ ಶ್ರೇಣಿ ವೇತನ ಪಡೆಯುತ್ತಾರೆ. 1987ರಿಂದಲೂ ಈ ಪದ್ದತಿ ಜಾರಿಯಲ್ಲಿದೆ. ಆದರೆ ಈ ಪದ್ದತಿಯು ವೃತ್ತಿ ಪ್ರಗತಿಗೆ ಪೂರಕವಾಗಿಲ್ಲ. ಅಲ್ಲದೇ ಎಂಎಸಿಪಿ ಅಡಿ ವೇತನ ನೀಡುವಂತೆ 2009ರಿಂದಲೂ ಮನವಿ ಸಲ್ಲಿಸುತ್ತಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಕೆ.ಪಿ.ಸಿಂಗ್ ಮಾಹಿತಿ ನೀಡಿದರು.
ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಸಂಜಯ್ಕುಮಾರ್, ಕೆವಿಎಸ್ ಉಪಾಧ್ಯಕ್ಷ ಪ್ರಾಚಿ ಪಾಂಡೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.