ADVERTISEMENT

2,454 ಪ್ರಕರಣ ಇತ್ಯರ್ಥ, 1,941 ಎಕರೆ ವಶ

37 ಪ್ರಕರಣಗಳಲ್ಲಿ ಒತ್ತುವರಿದಾರರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:49 IST
Last Updated 18 ಜುಲೈ 2019, 19:49 IST
   

ಬೆಂಗಳೂರು: ಸರ್ಕಾರದ ಜಾಗ ಒತ್ತುವರಿ ಮಾಡಿಕೊಂಡವರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲು ಅಸ್ತಿತ್ವಕ್ಕೆ ಬಂದ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳಲ್ಲಿ ಇದುವರೆಗೂ ದಾಖಲಾಗಿರುವ ಪ್ರಕರಣಗಳ ಪೈಕಿ 2,454 ಪ್ರಕರಣಗಳು ಇತ್ಯರ್ಥಗೊಂಡಿವೆ. ಆ ಮೂಲಕ 1,941 ಎಕರೆ ಜಾಗವನ್ನುವಾಪಸ್‌ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

‘ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ– 2011’ ಅಡಿ ಎರಡು ಪ್ರತ್ಯೇಕ ಪ್ರಧಾನ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 2016ರ ಅಕ್ಟೋಬರ್‌ನಿಂದ 2019ರ ಜೂನ್‌ವರೆಗೆ 5,181 ಪ್ರಕರಣಗಳು ದಾಖಲಾಗಿವೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಬಿ.ಎಸ್‌. ಪಾಟೀಲ ಹಾಗೂ ಶೈಲಜಾ ಕೃಷ್ಣ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿ37 ಪ್ರಕರಣಗಳಲ್ಲಿ ಒತ್ತುವರಿದಾರರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘1ನೇ ಪ್ರಧಾನ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾದ ಎಚ್‌.ಎನ್. ನಾರಾಯಣ್ (ಅಧ್ಯಕ್ಷ), ಬಿ. ಬಾಲಕೃಷ್ಣ (ನ್ಯಾಯಾಂಗ ಸದಸ್ಯ) ಹಾಗೂ ಬಿ.ಆರ್. ಜಯರಾಮರಾಜೇ ಅರಸ್ (ಕಂದಾಯ ಸದಸ್ಯ) ಅವರನ್ನು ಒಳಗೊಂಡ ಪೀಠವು 800 ಸಿವಿಲ್ ಪ್ರಕರಣಗಳನ್ನೂ ಇತ್ಯರ್ಥಪಡಿಸಿ ಭೂಮಿ ಸ್ವಾಧೀನಕ್ಕೆ ಪಡೆಯುವಂತೆ ಸಂಬಂಧಪಟ್ಟ ತಹಶೀಲ್ದಾರ್‌ ಅವರಿಗೆ ಆದೇಶ ನೀಡಿದೆ’ ಎಂದು ಬಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.‌

‘10 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಶ್ರೀರಂಗನಾಥ ದೇವಸ್ಥಾನದ ಸುಮಾರು 560 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದೂ ಅವರು ಹೇಳಿದರು.

27 ಪ್ರಕರಣಗಳಲ್ಲಿ ಶಿಕ್ಷೆ: ‘2ನೇ ನ್ಯಾಯಾಲಯವು 27 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ. ಇನ್ನೂ 336.01 ಎಕರೆ ಜಾಗವನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಂಡಿದೆ’ ಎಂದು ಶೈಲಜಾ ಕೃಷ್ಣ ನಾಯಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.