ADVERTISEMENT

Bengaluru: ಮೆಟ್ರೊ ಹಳಿಗೆ ಹಾರಿ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 15:17 IST
Last Updated 21 ಮಾರ್ಚ್ 2024, 15:17 IST
<div class="paragraphs"><p>ಧ್ರುವ್ ಠಕ್ಕರ್</p></div>

ಧ್ರುವ್ ಠಕ್ಕರ್

   

ಬೆಂಗಳೂರು: ಅತ್ತಿಗುಪ್ಪೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಹಳಿಗೆ ಹಾರಿ ಧ್ರುವ್ ಠಕ್ಕರ್ (19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಚಂದ್ರಾ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮುಂಬೈನ ಧ್ರುವ್, ನಗರದಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು, ವಸತಿನಿಲಯದಲ್ಲಿ ನೆಲೆಸಿದ್ದರು. ಅವರ ತಂದೆ–ತಾಯಿ ಮುಂಬೈನಲ್ಲಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಅತ್ತಿಗುಪ್ಪೆ ಮೆಟ್ರೊ ನಿಲ್ದಾಣಕ್ಕೆ ಗುರುವಾರ ಮಧ್ಯಾಹ್ನ ಬಂದಿದ್ದ ಧ್ರುವ್, ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದರು. 2.10 ಗಂಟೆ ಸುಮಾರಿಗೆ ರೈಲು ನಿಲ್ದಾಣದತ್ತ ಬಂದಿತ್ತು. ಮೆಟ್ರೊ ರೈಲು ನಿಲ್ದಾಣ ತಲುಪಲು ಕೆಲ ಮೀಟರ್‌ ಇರುವಾಗಲೇ ಧ್ರುವ್, ಹೈ ವೋಲ್ಟೇಜ್‌ ವಿದ್ಯುತ್‌ ಹರಿಯುವ ಹಳಿಯ ಮೇಲೆ ಹಾರಿದ್ದರು. ಧ್ರುವ್ ಅವರ ಮೇಲೆ ರೈಲು ಹರಿದಿತ್ತು.

ಧ್ರುವ್‌ ಅವರ ದೇಹ ಛಿದ್ರವಾಗಿತ್ತು. ಮೆಟ್ರೊ ಸಿಬ್ಬಂದಿ ಹಾಗೂ ಪೊಲೀಸರು, ಹಳಿ ಮೇಲಿದ್ದ ಮೃತದೇಹದ ಭಾಗಗಳನ್ನು ಸಂಗ್ರಹಿಸಿ ಆಸ್ಪತ್ರೆಗೆ ಸಾಗಿಸಿದರು.

‘ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಬಿಎಂಆರ್‌ಸಿಎಲ್ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಈ ದುರ್ಘಟನೆಯಿಂದಾಗಿ ಮೆಟ್ರೊ ರೈಲು ಸಂಚಾರ ವ್ಯತ್ಯಯಗೊಂಡಿತು. ಈ ಮಾರ್ಗದಲ್ಲಿ ಮಾಗಡಿಯಿಂದ ಚಲ್ಲಘಟ್ಟವರೆಗೆ ಸುಮಾರು 2 ತಾಸು ರೈಲು ಸಂಚಾರ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.