ಮಹದೇವಪುರ: ಅಂಚೆ ಪತ್ರಗಳು ಬಂದಿವೆಯೇ ಎಂದು ಖಾತರಿಪಡಿಸಿಕೊಳ್ಳಲು ಮನೆಗಳ ಗೇಟುಗಳಿಗೆ ಅಳವಡಿ
ಸುವ ಅಂಚೆ ಪೆಟ್ಟಿಗೆಯನ್ನು ನಿತ್ಯ ಪರಿಶೀಲಿಸಬೇಕಿಲ್ಲ. ಪತ್ರ ಡಬ್ಬದಲ್ಲಿ ಬಿದ್ದೊಡನೆಯೇ ಸಂಬಂಧಿಸಿದವರೆಗೆ ಮೊಬೈಲ್ ಸಂದೇಶ ರವಾನೆಯಾಗುತ್ತದೆ.
ಭಾರತೀಯ ಅಂಚೆ ಇಲಾಖೆಯು ‘ಸ್ಮಾರ್ಟ್ಡೆಲ್’ ಹೆಸರಿನಲ್ಲಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದನ್ನು ಶನಿವಾರ ನಗರದಲ್ಲಿ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊಅನಾವರಣ ಮಾಡಿದರು. ಮಂಡೂರು ಗ್ರಾಮದ ಪ್ರೆಸ್ಟೀಜ್ ಟ್ರ್ಯಾಂಕ್ವಿಲಿಟಿ ವಸತಿ ಸಮುಚ್ಚಯಕ್ಕೆ ಸ್ಮಾರ್ಟ್ ಡೆಲಿವರಿ ಬಾಕ್ಸ್ (ಡಿಜಿಟಲ್ ಲಾಕರ್ ಬಾಕ್ಸ್) ಅಳವಡಿಸಲಾಗಿದೆ. ಇದರೊಳಗೆ ಪೋಸ್ಟ್ ಮ್ಯಾನ್ ಪತ್ರವನ್ನು ಹಾಕಿದೊಡನೆಯೇ ಪತ್ರದಲ್ಲಿರುವವರ ವಿಳಾಸಕ್ಕೆ ಸಂದೇಶ ಹೋಗುತ್ತದೆ. ದೇಶದಲ್ಲಿಯೇ ಪ್ರಥಮ ಪ್ರಯೋಗ ಇದಾಗಿದ್ದು, ಯಶಸ್ವಿಯಾದಲ್ಲಿ ಇದನ್ನು ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.
‘ಅಂಚೆ ಕಚೇರಿಗೆ ಬಂದು ಪತ್ರಗಳನ್ನು ಪಡೆಯಬೇಕಿತ್ತು. ಇದೀಗ ಡಿಜಿಟಲ್ ಬಾಕ್ಸ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ. ಬಾಕ್ಸ್ನಲ್ಲಿ ಬ್ಲೂಟೂತ್ ಅಳವಡಿಸಲಾಗಿದೆ. ಪೋಸ್ಟ್ ಮ್ಯಾನ್ಗಳಿಗೆ ಮೊಬೈಲ್ ನೀಡಲಾಗಿದ್ದು, ಅದರಲ್ಲಿ ‘ಪೋಸ್ಟ್ ಮ್ಯಾನ್ ಮೊಬೈಲ್ ಆ್ಯಪ್’ ಇರಲಿದೆ. ಅವರು ಆ್ಯಪ್ ಮೂಲಕ ಪತ್ರದ ಬಾರ್ಕೋಡ್ ಸ್ಕ್ಯಾನ್ ಮಾಡಿ, ಬಾಕ್ಸ್ಗೆ ಹಾಕುತ್ತಾರೆ. ಇದರಿಂದ ಕೂಡಲೇ ಪತ್ರ ತಲುಪಬೇಕಾದವರಿಗೆ ಸಂದೇಶ ರವಾನೆಯಾಗುತ್ತದೆ’ ಎಂದು ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಬಿ.ಎಸ್.ಚಂದ್ರಶೇಖರ್ ತಿಳಿಸಿದರು.
‘ಸ್ಮಾರ್ಟ್ಡೆಲ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡವರು ಸಂದೇಶ ಬಂದ ಬಳಿಕ ಬಾಕ್ಸ್ ತೆಗೆದು, ಪತ್ರ ಸ್ವೀಕರಿಸಬಹುದು. ಬಾಕ್ಸ್ ಅನ್ಲಾಕ್ ಮಾಡುವ ಆಯ್ಕೆಯನ್ನು ಪತ್ರ ಸ್ವೀಕರಿಸುವವರಿಗೆ ನೀಡಲಾಗುತ್ತದೆ. ಪತ್ರವನ್ನು ಮನೆಯವರು ಡಬ್ಬದಿಂದ ತೆಗೆದುಕೊಳ್ಳದಿದ್ದಲ್ಲಿ ಐದು ದಿನಗಳ ಬಳಿಕ ಪೋಸ್ಟ್ ಮ್ಯಾನ್ಗಳು ಹಿಂಪಡೆಯುತ್ತಾರೆ. ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದ್ದು, ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ, ಇನ್ನಷ್ಟು ಸುಧಾರಿಸಲಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.