ಬೆಂಗಳೂರು: ‘ಹತ್ತು ವರ್ಷಗಳ ಹಿಂದೆ ಕಾಣಿಸಿಕೊಂಡ ಎಚ್1ಎನ್1 ಈಗಲೂ ಇದೆ. ಇಂಥದ್ದೊಂದು ಸಾಂಕ್ರಾಮಿಕ ಕಾಯಿಲೆ ಇಲ್ಲವೇನೋ ಎಂಬಂತೆ ಈಗ ಹೊಂದಿಕೊಂಡು ಹೋಗುತ್ತಿದ್ದೇವೆ. ಅದೇ ರೀತಿ ಕೋವಿಡ್ ಕೂಡ ಬಹುಕಾಲ ಇರಲಿದೆ. ಆದರೆ, ಅದರ ಶಕ್ತಿ ಕಡಿಮೆಯಾಗಲಿದೆ’ ಎನ್ನುತ್ತಾರೆ ಮಣಿಪಾಲ ಆಸ್ಪತ್ರೆಯ ಸೂಕ್ಷ್ಮಜೀವವಿಜ್ಞಾನ ವಿಭಾಗದ ವೈದ್ಯೆ ಡಾ. ಭಾವನಾ ಎಂ.ವಿ.
‘ಕೊರೊನಾ ಸೋಂಕಿಗೆ ಲಸಿಕೆ ಇನ್ನೂ ಕಂಡುಹಿಡಿದಿಲ್ಲ. 6 ತಿಂಗಳ ಹಿಂದಿನ ಸಂದರ್ಭಕ್ಕೆ ಹೋಲಿಸಿದರೆ, ಈಗ ಕೆಲವು ಹೊಸ ಔಷಧಿಗಳನ್ನು ಕೋವಿಡ್ ರೋಗಿಗಳಿಗೆ ನೀಡಲಾಗುತ್ತಿದೆ. ಸೋಂಕು ತಗುಲದಂತೆ ನೋಡಿಕೊಳ್ಳುವುದೂ ನಮ್ಮ ಕೈಯಲ್ಲಿಯೇ ಇದೆ. ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಇರಲೇಬೇಕು’ ಎಂದು ಅವರು ಹೇಳುತ್ತಾರೆ.
‘ಸಾರ್ವಜನಿಕ ಸ್ಥಳಗಳಲ್ಲಿ, ಕಚೇರಿಯಲ್ಲಿ ಅಂತರ ಕಾಯ್ದುಕೊಳ್ಳಬೇಕು. ಕಂಪ್ಯೂಟರ್ ಅಥವಾ ಇನ್ನಾವುದೇ ವಸ್ತುಗಳನ್ನು, ಸಾಧನಗಳನ್ನು ಮುಟ್ಟಿದರೆ ಸ್ಯಾನಿಟೈಸರ್ನಿಂದ ಕೈ ಒರೆಸಿಕೊಳ್ಳಬೇಕು. ಹೊರಗಡೆಯಿಂದ ಮನೆಯೊಳಗೆ ಹೋಗುತ್ತಿ
ದ್ದಂತೆ, ಸೋಪಿನ ನೀರಿನಿಂದ ಚೆನ್ನಾಗಿ ಕೈತೊಳೆದುಕೊಳ್ಳಬೇಕು. ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.
‘ದೈಹಿಕ–ಮಾನಸಿಕ ಆರೋಗ್ಯದತ್ತಲೂ ಗಮನ ನೀಡಲೇಬೇಕಾಗುತ್ತದೆ. ನಿತ್ಯ ಕೆಲಸ ಮಾಡುತ್ತಿರುವವರು, ಕೆಲಸ ಕಳೆದುಕೊಂಡವರು ಒತ್ತಡ ಅನುಭವಿಸುತ್ತಿದ್ದಾರೆ. ಇಂಥವರು ಪ್ರಾಣಾಯಾಮ, ಧ್ಯಾನ, ಯೋಗಾಭ್ಯಾಸ ಮಾಡುವುದು ಉತ್ತಮ. ಪ್ರೀತಿಪಾತ್ರರೊಂದಿಗೆ ಮಾತನಾಡುವುದು, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಅಗತ್ಯವಿದ್ದರೆ ವೈದ್ಯಕೀಯ ಸಲಹೆಯನ್ನೂ ಪಡೆಯಬಹುದು’ ಎನ್ನುತ್ತಾರೆ.
‘ಸೋಂಕಿನ ಬಗ್ಗೆ ಮೊದಲು ಯಾರಿಗೂ ತಿಳಿದಿರಲಿಲ್ಲ. ಈಗ ಶೇ 75ಕ್ಕೂ ಹೆಚ್ಚು ಜನ ಗುಣಮುಖರಾ
ಗುತ್ತಿದ್ದಾರೆ. ಲಕ್ಷಣಗಳು ಕಂಡಕೂಡಲೇ ಫೀವರ್ ಕ್ಲಿನಿಕ್ಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈಗ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿದೆ. ವೈದ್ಯರ ಜೊತೆಗೂ ಸಮಾಲೋಚನೆ ನಡೆಸುವ ಅವಕಾಶವಿದೆ’ ಎಂದು ಭಾವನಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.