ADVERTISEMENT

ಸಾಹಿತ್ಯದ ಓದು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕ: ಪ್ರಾಧ್ಯಾಪಕಿ ಫರ್ಹಾನಾಜ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 16:15 IST
Last Updated 2 ಫೆಬ್ರುವರಿ 2024, 16:15 IST
ಫರ್ಹಾನಾಜ್
ಫರ್ಹಾನಾಜ್   

ಬೆಂಗಳೂರು: ‘ಸ್ನಾತಕೋತ್ತರ ಪದವಿ ಅಧ್ಯಯನ ಸಂದರ್ಭದಲ್ಲಿ ಬೋಧಿಸಲಾಗುತ್ತಿದ್ದ ನಿಗದಿತ ಪಠ್ಯಕ್ರಮವಲ್ಲದೇ, ಸಾಹಿತ್ಯವನ್ನೂ ಓದಿದ್ದರಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಅನುಕೂಲವಾಯಿತು’ ಎಂದು ಸಹಾಯಕ ಪ್ರಾಧ್ಯಾಪಕಿ ಫರ್ಹಾನಾಜ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ. ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಕನ್ನಡ ವಿಭಾಗದ ‘ಕನ್ನಡ ಸಾಹಿತ್ಯ ವೇದಿಕೆ’ ವತಿಯಿಂದ ಆಯೋಜಸಲಾಗಿದ್ದ ‘ಕಾಫಿ ವಿಥ್ ಕವಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮಗೆ ಬದುಕಿನಲ್ಲಿ ಹಲವು ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಿದಾಗ ದಕ್ಕುವ ಅನುಭವಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪಠ್ಯಗಳನ್ನು, ಪಠ್ಯೇತರ ಪುಸ್ತಕಗಳನ್ನೂ ಓದಬೇಕು. ಆಗ ಮಾತ್ರ ನಮ್ಮಲ್ಲಿ ಹೊಸಭಾವನೆಗಳು, ಹೊಸಚಿಂತನೆಗಳು ಮೂಡುತ್ತವೆ. ನಮ್ಮ ಸುತ್ತಮುತ್ತಲಿನ ಸಾಮಾಜಿಕ ಸಂರಚನೆ, ವಿವಿಧ ತಾರತಮ್ಯಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಅವುಗಳನ್ನು ವಿಮರ್ಶಿಸುವ ಶಕ್ತಿಯೂ ಬರುತ್ತದೆ. ಇನ್ನೊಬ್ಬರಿಗೆ ಧಕ್ಕೆಯಾಗದಂತೆ ಅಭಿವ್ಯಕ್ತಿಸಲು ಸಾಹಿತ್ಯ ಮಾರ್ಗದ ಮೂಲಕ ಸಾಧ್ಯ’ ಎಂದು ತಿಳಿಸಿದರು.

ADVERTISEMENT

ಕನ್ನಡ ವಿಭಾಗದ ಮುಖ್ಯಸ್ಥ ಸರ್ವೇಶ್ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕರಾದ ಚಂದ್ರಶೇಖರ್ ಎನ್., ಸೈಯದ್ ಮುಯಿನ್, ರವಿಶಂಕರ್ ಎ.ಕೆ., ಪ್ರೇಮ್‍ಕುಮಾರ್ ಕೆ., ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಾಪಕ ಸಂಚಾಲಕರಾದ ಕುಪ್ಪನಹಳ್ಳಿ ಎಂ.ಭೈರಪ್ಪ, ವಿದ್ಯಾರ್ಥಿ ಸಂಚಾಲಕರಾದ ಮಾನಸ ಹಾಗೂ ಭುವನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.