ADVERTISEMENT

ಫ್ರೇಜರ್‌ ಟೌನ್‌ನಲ್ಲಿ ಆಹಾರ ಮೇಳ ಬೇಡ: ಪೊಲೀಸರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 15:40 IST
Last Updated 24 ಫೆಬ್ರುವರಿ 2024, 15:40 IST
ಫ್ರೇಜರ್ ಟೌನ್‌ ಕ್ಷೇಮಾಭಿವೃದ್ಧಿ ಒಕ್ಕೂಟದ ಪದಾಧಿಕಾರಿಗಳು, ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಮನ್‌ ಗುಪ್ತಾ ಅವರಿಗೆ ಮನವಿ ಸಲ್ಲಿಸಿದರು.
ಫ್ರೇಜರ್ ಟೌನ್‌ ಕ್ಷೇಮಾಭಿವೃದ್ಧಿ ಒಕ್ಕೂಟದ ಪದಾಧಿಕಾರಿಗಳು, ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಮನ್‌ ಗುಪ್ತಾ ಅವರಿಗೆ ಮನವಿ ಸಲ್ಲಿಸಿದರು.   

ಬೆಂಗಳೂರು: ರಂಜಾನ್‌ ಮಾಸದ ಅಂಗವಾಗಿ ಪ್ರತಿವರ್ಷ ನಗರದ ಫ್ರೇಜರ್‌ ಟೌನ್‌ನಲ್ಲಿ ನಡೆಯುವ ‘ಆಹಾರ ಮೇಳ’ಕ್ಕೆ ವಿರೋಧ ವ್ಯಕ್ತವಾಗಿದೆ.

ಪುಲಕೇಶಿನಗರ ಪೊಲೀಸ್‌ ಠಾಣೆಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಪೂರ್ವ ವಲಯದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ರಮನ್‌ ಗುಪ್ತಾ ಅವರಿಗೆ ಫ್ರೇಜರ್‌ ಟೌನ್‌ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಸೌದ್‌ ದಸ್ತಗೀರ್‌ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಸ್ಥಳೀಯರು, ಫ್ರೇಜರ್‌ ಟೌನ್‌ನಲ್ಲಿ ಆಹಾರ ಮೇಳ ನಡೆಸುವುದು ಬೇಡ ಎಂದು ಕೋರಿದರು.

‘ಸಾಮಾಜಿಕ ಜಾಲತಾಣದಲ್ಲಿ ಫ್ರೇಜರ್‌ ಟೌನ್‌ನಲ್ಲಿ ನಡೆಯುವ ಆಹಾರ ಮೇಳದ ವಿರುದ್ಧ ಅಭಿಯಾನ ಆರಂಭವಾಗಿದೆ. ಈ ರಸ್ತೆಯಲ್ಲಿ ಆಹಾರ ಮೇಳಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸ್ಥಳೀಯರು ಹೇಳಿದರು.

ADVERTISEMENT

ಗ್ರಾಹಕರು, ಮಾಂಸದ ಖಾದ್ಯವನ್ನು ಸೇವಿಸಿ ಪ್ಲೇಟ್‌ಗಳೂ ಸೇರಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ರಸ್ತೆಗಳಲ್ಲಿ ಕಸದ ರಾಶಿಯೇ ಬಿದ್ದಿರುತ್ತದೆ. ಸುಮಾರು ಒಂದು ತಿಂಗಳು ನಡೆಯುವ ಮೇಳದಿಂದ ಸ್ಥಳೀಯರಿಗೆ ತೊಂದರೆ ಆಗುತ್ತದೆ ಎಂದು ಪೊಲೀಸರಿಗೆ ತಿಳಿಸಿದರು.

‘ಪ್ರತಿನಿತ್ಯ ಮಾಂಸದ ಖಾದ್ಯ ತಯಾರಿಕೆಗೆ 3 ಟನ್‌ನಷ್ಟು ಸೌದೆ ಉರಿಸಲಾಗುತ್ತಿದೆ. ಹೊಗೆಯಿಂದ ಮಕ್ಕಳು ಹಾಗೂ ವೃದ್ಧರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಕಳೆದ ವರ್ಷ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಎದುರಾಗಿತ್ತು’ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.