ಬೆಂಗಳೂರು: ಬಸವನಗುಡಿ ಠಾಣೆ ವ್ಯಾಪ್ತಿಯ ಸುಬ್ಬಣ್ಣ ಚೆಟ್ಟಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಿದ್ದರಾಜು (26) ಎಂಬುವರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
'ಕೊಳ್ಳೆಗಾಲದ ಸಿದ್ದರಾಜು, ಲಾರಿ ಕ್ಲೀನರ್ ಆಗಿದ್ದರು. ಅವರ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದವು. ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಹೋಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ' ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.
ಬಿಟ್ಟುಹೋಗಿದ್ದ ಪತ್ನಿ; 'ಸಿದ್ದರಾಜು ಅವರು ಹೂವು ಮಾರುವ ಲತಾ (28) ಎಂಬುವರನ್ನು ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ, ಕೌಟುಂಬಿಕ ಕಲಹದಿಂದ ದಂಪತಿ ಬೇರೆಯಾಗಿದ್ದರು' ಎಂದು ಪೊಲೀಸರು ಹೇಳಿದರು.
'ಸಿದ್ದರಾಜುನನ್ನು ಬಿಟ್ಟು ಹೋಗಿದ್ದ ಲತಾ, ಲಕ್ಷ್ಮಣ ಅಲಿಯಾಸ್ ಲಚ್ಚಿ ಎಂಬಾತನನ್ನು ಮದುವೆಯಾಗಿದ್ದಳು. ತಾಯಿಯ ಮನೆಯಲ್ಲಿ ಉಳಿದುಕೊಂಡಿದ್ದಳು. ಅದರಿಂದ ಸಿಟ್ಟಾಗಿದ್ದ ಸಿದ್ದರಾಜು, ಲತಾ ತವರು ಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದ.'
'ಶುಕ್ರವಾರವೂ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಲತಾ ಹಾಗೂ ಅವರ ತಾಯಿ ಮೇಲೆ ಹಲ್ಲೆಗೂ ಯತ್ನಿಸಿದ್ದ. ಇದು ಗೊತ್ತಾಗುತ್ತಿದ್ದಂತೆ ಲಕ್ಷ್ಮಣ, ಸಿದ್ದರಾಜುನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ' ಎಂದೂ ಪೊಲೀಸರು ತಿಳಿಸಿದರು.
'ಲಾರಿ ಬಳಿಯೇ ತಡರಾತ್ರಿ ಸಿದ್ದರಾಜು ಹಾಗೂ ಸ್ನೇಹಿತರು ಮದ್ಯ ಕುಡಿಯುತ್ತ ಕುಳಿತಿದ್ದರು. ಅಲ್ಲಿಗೆ ಬಂದಿದ್ದ ಲಕ್ಷ್ಮಣ, ಜಗಳ ತೆಗೆದು ಸಿದ್ದರಾಜುನನ್ನು ಕೊಂದು ಪರಾರಿಯಾಗಿದ್ದಾನೆ. ಈ ಸಂಬಂಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ' ಎಂದೂ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.