ಬೆಂಗಳೂರು: ‘ಮುಂಬೈನ ಕೆಎಫ್ಸಿ ಕಂಪನಿಯಿಂದ ₹ 25 ಲಕ್ಷ ಲಾಟರಿ ಹೊಡೆದಿರುವುದಾಗಿ ಹೇಳಿ ಆಮಿಷವೊಡ್ಡಿದ್ದ ವಂಚಕರು ತೆರಿಗೆ ಹೆಸರಿನಲ್ಲಿ ₹12.25 ಲಕ್ಷ ಪಡೆದುಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ.
‘ಸ್ಥಳೀಯ ನಿವಾಸಿ ಆಗಿರುವ ಶಿಕ್ಷಕಿ ನೀಡಿರುವ ದೂರು ಆಧರಿಸಿ ಆರೋಪಿಗಳಾದ ರಾಜೇಶ್ ಬಾಲಾ ಹಾಗೂ ರಾಣಾ ಪ್ರತಾಪ್ ಸಿಂಗ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ತನ್ನ ಹೆಸರು ರಾಣಾ ಪ್ರತಾಪ್ ಸಿಂಗ್ ಎಂದು ಹೇಳಿಕೊಂಡುಆಗಸ್ಟ್ 10ರಂದು ಶಿಕ್ಷಕಿಗೆ ಕರೆ ಮಾಡಿದ್ದ ವ್ಯಕ್ತಿ, ‘₹ 25 ಲಕ್ಷ ಲಾಟರಿ ಹೊಡೆದಿದೆ. ಸದ್ಯದಲ್ಲೇ ನಿಮ್ಮ ಖಾತೆಗೆ ಹಣ ಜಮೆ ಮಾಡುತ್ತೇವೆ’ ಎಂದಿದ್ದ. ಅದಾದ ನಂತರ ತೆರಿಗೆ ಅಧಿಕಾರಿ ಎಂದು ಹೇಳಿಕೊಂಡು ರಾಜೇಶ್ ಬಾಲಾ ಸಹ ಶಿಕ್ಷಕಿಗೆ ಕರೆ ಮಾಡಿದ್ದ’
‘₹ 12.25 ಲಕ್ಷ ತೆರಿಗೆ ಪಾವತಿ ಮಾಡಿದರೆ, ಲಾಟರಿ ಹೊಡೆದಿರುವ ಹಣ ಸೇರಿ ಒಟ್ಟು ₹ 35 ಲಕ್ಷ ನಿಮ್ಮ ಖಾತೆಗೆ ಜಮೆ ಆಗುತ್ತದೆ’ ಎಂಬುದಾಗಿ ರಾಜೇಶ್ ಹೇಳಿದ್ದ. ಅದನ್ನು ನಂಬಿದ್ದ ಶಿಕ್ಷಕಿ, ಆರೋಪಿ ಸೂಚಿಸಿದ್ದ ಕೆನರಾ ಬ್ಯಾಂಕ್ನ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಹಣ ಹಾಕಿದ್ದರು. ಅದಾದ ಬಳಿಕ ಆರೋಪಿಗಳು ಯಾವುದೇ ಲಾಟರಿ ಹಣವನ್ನು ನೀಡದೇ ವಂಚಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.