ನೆಲಮಂಗಲ: ಬೆಂಗಳೂರು ಉತ್ತರ ತಾಲ್ಲೂಕಿನ ಅಡಕಮಾರನಹಳ್ಳಿಯ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ನಾಗರಾಜಗೌಡ(50) ಹಾಗೂ ಶ್ರೀನಿವಾಸ್ (50) ಮೃತಮಟ್ಟವರು.
ಘಟನೆಯು ಸೋಮವಾರ ನಡೆದಿತ್ತು. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದರು. ನಾಗರಾಜಗೌಡ ಹಾಗೂ ಶ್ರೀನಿವಾಸ್ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಅಡಕಮಾರನಹಳ್ಳಿಯ ಗಂಗಯ್ಯ ಅವರ ಮನೆಯಲ್ಲಿ ಬಳ್ಳಾರಿ ಜಿಲ್ಲೆಯ ನಾಗರಾಜಗೌಡ ಕುಟುಂಬವು ಬಾಡಿಗೆಗೆ ನೆಲಸಿತ್ತು. ಸೋಮವಾರ ಬೆಳಿಗ್ಗೆ ಕೆಲಸಕ್ಕೆ ತೆರಳುವ ವೇಳೆ ನಾಗರಾಜ್ ಅವರು ದೇವರಿಗೆ ದೀಪ ಹಚ್ಚುತ್ತಿದ್ದರು. ಅವರ ಎರಡನೇ ಪುತ್ರ ಅಭಿಷೇಕ್ ಅವರು ಖಾಲಿಯಾಗಿದ್ದ ಸಿಲಿಂಡರ್ ಅನ್ನು ಬದಲಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ವಾಷರ್ ಸರಿ ಇಲ್ಲದೇ ಇದ್ದ ಕಾರಣಕ್ಕೆ ಅನಿಲ ಸೋರಿಕೆ ಆಗಿ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಮನೆ ಸಂಪೂರ್ಣ ಆಹುತಿ ಆಗಿತ್ತು.
ಬೆಂಕಿ ಅವಘಡದಲ್ಲಿ ನಾಗರಾಜಗೌಡ, ಅವರ ಪತ್ನಿ ಲಕ್ಷ್ಮೀದೇವಿ(35), ಪುತ್ರರಾದ ಬಸವನಗೌಡ(19), ಅಭಿಷೇಕ್(18) ಹಾಗೂ ನೆರವಿಗೆ ಬಂದಿದ್ದ ಪಕ್ಕದ ಮನೆಯ ಶ್ರೀನಿವಾಸ್ (50), ಮನೆ ಮಾಲೀಕ ಗಂಗಯ್ಯ ಅವರ ಮಗ ಶಿವಶಂಕರ್ ಗಾಯಗೊಂಡಿದ್ದರು. ಅಭಿಷೇಕ್ ಅವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.