ADVERTISEMENT

ಅಗಸ, ಅಗಸಗಿತ್ತಿ ಪದ ಬಳಕೆ ಬೇಡ: ಮಡಿವಾಳರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 21:58 IST
Last Updated 22 ಜನವರಿ 2020, 21:58 IST

ಬೆಂಗಳೂರು: ‘ಮಡಿವಾಳ ಸಮುದಾಯವನ್ನು ಅಗಸ, ಅಗಸಗಿತ್ತಿ ಎಂದು ಕರೆಯಲಾಗುತ್ತಿದೆ. ಇದರಿಂದ ಸಮುದಾಯಕ್ಕೆ ಮುಜುಗರ ಉಂಟಾಗುತ್ತಿದ್ದು, ಸಮುದಾಯವನ್ನು ಮಡಿವಾಳರು ಎಂದು ಗೌರವಯುತವಾಗಿ ಕರೆಯುವ ಕಾನೂನು ರಚನೆ ಮಾಡಬೇಕು’ ಎಂದು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ವೆಂಕಟರಮಣ,‘ತಾಂತ್ರಿಕವಾಗಿ ಜಗತ್ತು ಇಷ್ಟೆಲ್ಲಾ ಮುಂದುವರಿದಿದ್ದರೂ ನಮ್ಮ ಸಮುದಾಯ ಜಾತಿ ಸೂಚಕ ಪದಗಳಿಂದ ಕರೆಯಲ್ಪಡುತ್ತಿದೆ. ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೂ ಮುಜುಗರವಾಗುತ್ತಿದೆ’ ಎಂದರು.

‘ವೃತ್ತಿ ಹೆಸರಿನಿಂದ ಸಮುದಾಯವನ್ನು ಕರೆಯುವ ಪದ್ಧತಿಯನ್ನು ನಿಷೇಧಿಸಿ ಕಾನೂನು ರೂಪಿಸಬೇಕು. ಫೆಬ್ರುವರಿ 1ರಂದು ಮಡಿವಾಳ ಮಾಚಿದೇವರ ಜಯಂತಿ ಇದ್ದು, ಅಂದು ಈ ಬಗ್ಗೆ ಸ್ಪಷ್ಟ ಭರವಸೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

ಸಂಘದ ಉಪಾಧ್ಯಕ್ಷ ಬಿ.ಆರ್.ಪ್ರಕಾಶ್, ‘ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಎಸ್‌.ಸಿಗೆ ಸೇರಿಸುವಂತೆಅನ್ನಪೂರ್ಣಮ್ಮ ಸಮಿತಿಯೂ ಶಿಫಾರಸು ಮಾಡಿತ್ತು. ಆದರೂ ಈ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಡಿವಾಳರ ಅಭಿವೃದ್ಧಿ ನಿಗಮಕ್ಕೆ ₹25 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಈ ನಿಗಮಕ್ಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.