ಹೆಸರಘಟ್ಟ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ತೋಟಗೆರೆ ಬಸವೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ವತಿಯಿಂದ 12ನೇ ವರ್ಷದ ಸೂರ್ಯ ಲಕ್ಷ ದೀಪೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಿತು.
ಬಸವೇಶ್ವರ ಸ್ವಾಮಿಯ ಗರ್ಭಗುಡಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು ಹೋಮ, ಹವನ, ಅಭಿಷೇಕ ನಡೆದವು. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ವಾದ್ಯಮೇಳಗಳೊಂದಿಗೆ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ನಂದಿದ್ವಜ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು.
ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ಒಮ್ಮೆಗೆ 13 ಸಾವಿರ ದೀಪಗಳನ್ನು ಹಚ್ಚುವ ವ್ಯವಸ್ಥೆ ಮಾಡಲಾಗಿತ್ತು.
ಶಿವರಾತ್ರಿ ಹಬ್ಬದ ಪ್ರಯುಕ್ತ ಕ್ಷೇತ್ರದಲ್ಲಿ ನಡೆದ ದನಗಳ ಜಾತ್ರೆಗೆ ಆಗಮಿಸಿದ್ದ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಕಡೆ ಹಲ್ಲು ವಿಭಾಗಗಳಲ್ಲಿ ವಿಜೇತ ರೈತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಹಿತ ಚಿಂತನ ಚಾರಿಟಬಲ್ ಟ್ರಸ್ಟ್ ವತಿಯಿಂದ ತಲಾ 100 ಗ್ರಾಂ, 50 ಗ್ರಾಂ, 25 ಗ್ರಾಂ ಬೆಳ್ಳಿಯನ್ನು ಬಹುಮಾನವಾಗಿ ವಿತರಣೆ ಮಾಡಲಾಯಿತು.
ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 15,000 ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಪೀಣ್ಯ ದಾಸರಹಳ್ಳಿ ವರದಿ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಾಸರಹಳ್ಳಿಯ ಶಿವ ದೇವಸ್ಥಾನದಲ್ಲಿ ಶಿವ ಲಿಂಗಕ್ಕೆ ಪುಷ್ಪಾಲಂಕಾರ ಮತ್ತು ವಿಶೇಷ ಪೂಜೆ, ಶಿವಮಂತ್ರ ಪಠಣೆ ಮತ್ತು ಭಕ್ತಿಗೀತೆ ಗಾಯನ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶಿವಪೂಜೆ ಸಲ್ಲಿಸಿ ದರ್ಶನ ಪಡೆದರು. ಭಕ್ತರಿಗೆ ಲಾಡು ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾಸಕ ಎಸ್ ಮುನಿರಾಜು ಹಾಗೂ ಸುಜಾತ ಮುನಿರಾಜು ದಂಪತಿ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಜಿ ಮರಿಸ್ವಾಮಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶಿವಾಲಯ ಟ್ರಸ್ಟ್ ಅಧ್ಯಕ್ಷ ವಿ.ಎನ್. ಸಿದ್ದಗಂಗಯ್ಯ, ದಾಸರಹಳ್ಳಿ ಶಿವಾಲಯ ಸೇವಾ ಸಮಿತಿ ಟ್ರಸ್ಟ್ ಗೌರವ ಅಧ್ಯಕ್ಷ ಜಿ. ರುದ್ರೇಶ್ ಬಸವರಾಜಯ್ಯ, ಅಧ್ಯಕ್ಷ ವಿ.ಎನ್. ಸಿದ್ದಗಂಗಯ್ಯ, ಉಪಾಧ್ಯಕ್ಷರಾದ ಶಂಭುಲಿಂಗಪ್ಪ ಟಿ.ಎನ್, ಎಂ.ಬಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಉಮಾಪತಿ ಬಿ.ಪಿ., ಖಜಾಂಜಿ ಕೆ.ವಿ. ರುದ್ರಪ್ಪ, ಸಹಕಾರ್ಯದರ್ಶಿ ಸದಾಶಿವಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.