ADVERTISEMENT

ನಕಲಿ ಸಹಿ ಬಳಸಿ ವರ್ಗಾವಣೆ ಆದೇಶ: ಉಪನ್ಯಾಸಕ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 20:19 IST
Last Updated 6 ಜನವರಿ 2022, 20:19 IST

ಬೆಂಗಳೂರು: ಪದವಿಪೂರ್ವ ಕಾಲೇಜಿನ ಉಪನ್ಯಾಸಕರೊಬ್ಬರು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿಯ ಸಹಿ ನಕಲು ಮಾಡಿದ್ದಲ್ಲದೆ ತಾವೇ ವರ್ಗಾವಣೆ ಆದೇಶದ ಪ್ರತಿ ಸಿದ್ಧಪಡಿಸಿ ಮೈಸೂರಿನ ಮಹಾರಾಣಿ ಪಿ.ಯು.ಕಾಲೇಜಿಗೆ ಕಳುಹಿಸಿದ್ದಾರೆ. ಅವರ ವಿರುದ್ಧ ನಗರದ ಮಲ್ಲೇಶ್ವರ ‍ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕುಕಳಸದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಎನ್‌.ಶಿವಾನಂದ ವಿರುದ್ಧಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಆರ್‌.ಸ್ನೇಹಲ್‌ ದೂರು ನೀಡಿದ್ದಾರೆ. ಶಿವಾನಂದ ಅವರನ್ನು ತಾನು ಮಹಾರಾಣಿ ಕಾಲೇಜಿಗೆ ವರ್ಗಾವಣೆ ಮಾಡಿರುವುದಾಗಿ ಅವರು ಸುಳ್ಳು ಆದೇಶ ಪತ್ರ ಸಿದ್ಧಪಡಿಸಿದ್ದಾರೆ. ಅದಕ್ಕೆ ನನ್ನ ಸಹಿ ನಕಲು ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘2021ರ ಡಿಸೆಂಬರ್‌ 27ರಂದು ಶಿವಾನಂದ ಅವರು ನಕಲಿ ವರ್ಗಾವಣೆ ಆದೇಶ ಪತ್ರ ಸಿದ್ಧಪಡಿಸಿದ್ದರು. ಅದನ್ನು ಕಚೇರಿಯ ಅಧಿಕೃತ ಲಕೋಟೆಯಲ್ಲೇ ಇಟ್ಟು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಿಂದ ಮೈಸೂರಿನ ಮಹಾರಾಣಿ ಪಿ.ಯು.ಕಾಲೇಜಿನ ಪ್ರಾಂಶುಪಾಲರಿಗೆ ‘ಸ್ಪೀಡ್‌ ಪೋಸ್ಟ್‌’ ಮೂಲಕ ಕಳುಹಿಸಲಾಗಿತ್ತು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.