ADVERTISEMENT

ಪೊಲೀಸ್‌ ಗಸ್ತು ಸಿಬ್ಬಂದಿಗೆ ಟ್ಯಾಬ್‌ ವಿತರಣೆ

‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 15:43 IST
Last Updated 18 ಜುಲೈ 2025, 15:43 IST
‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದ ಸ್ಟಿಕರ್ ಅನ್ನು ಬೆಂಗಳೂರಿನ ಗೋವಿಂದರಾಜನಗರದ ಮನೆಯೊಂದರ ಬಾಗಿಲಿಗೆ ಗೃಹ ಸಚಿವ ಜಿ.ಪರಮೇಶ್ವರ ಅಂಟಿಸಿದರು 
‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದ ಸ್ಟಿಕರ್ ಅನ್ನು ಬೆಂಗಳೂರಿನ ಗೋವಿಂದರಾಜನಗರದ ಮನೆಯೊಂದರ ಬಾಗಿಲಿಗೆ ಗೃಹ ಸಚಿವ ಜಿ.ಪರಮೇಶ್ವರ ಅಂಟಿಸಿದರು    

ಬೆಂಗಳೂರು: ರಾಜ್ಯ ಪೊಲೀಸರು ಜಾರಿಗೆ ತಂದಿರುವ ‘ಮನೆ–ಮನೆಗೆ ಪೊಲೀಸ್’ ನೂತನ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಅವರು ಗೋವಿಂದರಾಜನಗರದಲ್ಲಿ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ದೇಶದಲ್ಲಿಯೇ ಪ್ರಥಮ ಬಾರಿಗೆ ಮನೆ–ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ. ಬೇರೆ ಯಾವ ರಾಜ್ಯದಲ್ಲಿಯೂ ಸಹ ಈ ರೀತಿಯ ಕಾರ್ಯಕ್ರಮ ಇಲ್ಲ. ಇದುವರೆಗೂ ಪೊಲೀಸರು ಬಡಾವಣೆಗಳಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಡೆಸುತ್ತಿದ್ದರು. ಮುಂದಿನ ದಿನಗಳಲ್ಲಿ ಯಾವ ಮನೆಗೆ ಯಾರು ಬಂದಿದ್ದಾರೆ, ಮನೆಯವರು ಏನು ಕೆಲಸ ಮಾಡುತ್ತಿದ್ದಾರೆ. ಯಾವ ಸಮಸ್ಯೆಗಳಿವೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ದತ್ತಾಂಶ ಪೊಲೀಸರ ಬಳಿ ಇರಲಿದೆ’ ಎಂದು ಹೇಳಿದರು.

‘ನೆರೆ–ಹೊರೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ, ಮಕ್ಕಳಿಗೆ ತೊಂದರೆ ಆಗುತ್ತಿದ್ದರೆ, ಮಾದಕ ವಸ್ತುಗಳ ಮಾರಾಟ ನಡೆಯುತ್ತಿದ್ದರೆ ಆ ಮಾಹಿತಿಯನ್ನು ಪೊಲೀಸರ ಜತೆಗೆ ನಾಗರಿಕರು ಹಂಚಿಕೊಳ್ಳಬಹುದು. ಗಸ್ತು ಸಿಬ್ಬಂದಿಗೆ ಟ್ಯಾಬ್‌ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ADVERTISEMENT

‘ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆದುಕೊಳ್ಳಲಾಗುವುದು. ನಂತರ, ಬದಲಾವಣೆ ಮಾಡುವುದಿದ್ದರೆ ಸರಿಪಡಿಸುತ್ತೇವೆ’ ಎಂದು ಹೇಳಿದರು‌.

‘ಬೆಂಗಳೂರಿನಲ್ಲಿ ಟೋಯಿಂಗ್ ವ್ಯವಸ್ಥೆ ಮರು ಜಾರಿ ಮಾಡಲಾಗುವುದು. ಪೊಲೀಸ್ ಸಿಬ್ಬಂದಿಯೇ ಟೋಯಿಂಗ್ ಮಾಡಲಿದ್ದಾರೆ. ಟೋಯಿಂಗ್‌ಗೆ ಪಾಲಿಕೆಯಿಂದ ವಾಹನಗಳನ್ನು ನೀಡಲಾಗುವುದು’ ಎಂದು ಹೇಳಿದರು.

ನಿರ್ಭಯಾ ಯೋಜನೆ ಅಡಿ ನಗರದಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 50 ಸೇಫ್ ಐ– ಲ್ಯಾಂಡ್‌ಗಳನ್ನು ಸ್ಥಾಪಿಸಲಾಗಿದೆ. ಡ್ರಗ್ಸ್‌ ಮುಕ್ತ ಬೆಂಗಳೂರು ಮಾಡುತ್ತೇವೆ ಎಂದರು.

ಇದೇ ವೇಳೆ ಕೆಲವು ಜಿಲ್ಲೆಗಳ ಎಸ್‌ಪಿ ಹಾಗೂ ಪೊಲೀಸ್ ಕಮಿಷನರ್‌ಗಳೊಂದಿಗೆ ಸಂವಾದ ನಡೆಸಿ ಕಾರ್ಯಕ್ರಮದ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಕೈಪಿಡಿ ಬಿಡುಗಡೆ ಮಾಡಲಾಯಿತು. ‌

ಪೊಲೀಸ್ ಅಧಿಕಾರಿಗಳ ಜತೆಗೆ ಗೋವಿಂದರಾಜ‌ನಗರದ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಸಚಿವರು ಮಾಹಿತಿ ಪಡೆದುಕೊಂಡರು.

ಶಾಸಕ ಪ್ರಿಯಕೃಷ್ಣ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್ ಹಾಜರಿದ್ದರು.

‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದ ಸ್ಟಿಕರ್‌ ಅನ್ನು ಮಹಿಳೆಯೊಬ್ಬರು ಪರಿಶೀಲಿಸಿದರು 
ಮಹಿಳೆಯರು ತೊಂದರೆಯಲ್ಲಿದ್ದಾಗ ಪೊಲೀಸರು ಕೂಡಲೇ ಸ್ಪಂದಿಸುತ್ತಿದ್ದಾರೆ. ಬೆಂಗಳೂರನ್ನು ಮಹಿಳೆಯರ ಸುರಕ್ಷತಾ ನಗರವನ್ನಾಗಿ ಮಾಡುತ್ತೇವೆ 
– ಜಿ.ಪರಮೇಶ್ವರ ಗೃಹ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.