ಬೆಂಗಳೂರು: ವಲಸೆ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸುವ ಕುರಿತಂತೆ ಇರುವ ಗೊಂದಲ ಮಂಗಳವಾರವೂ ಮುಂದುವರಿದಿದೆ. ಇಲ್ಲಿನ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಇಟ್ಟಿರುವ ಕಾರ್ಮಿಕರ ಪೈಕಿ, ಜಾರ್ಖಂಡ್ನ 31 ಕಾರ್ಮಿಕರಿಗೆ ಮಂಗಳವಾರ ರೈಲಿಗೆ ಹೋಗಲು ಅವಕಾಶ ಸಿಗಲಿಲ್ಲ. ಅವರು ನಡೆದುಕೊಂಡೇ ಹೋಗಲು ಮುಂದಾದಾಗ ಪೊಲೀಸರು ತಡೆದಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಬಿಬಿಎಂಪಿಯ ಮಾರ್ಷಲ್ಗಳು ಜಾರ್ಖಂಡ್ನ 31 ಕಾರ್ಮಿಕರನ್ನು ಇಲ್ಲಿ ತಂದು ಬಿಟ್ಟಿದ್ದಾರೆ. ಆದರೆ ಅವರನ್ನು ರಾಜ್ಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡುತ್ತಿಲ್ಲ ಎಂದು ಎಐಸಿಸಿಟಿಯು ಮುಖಂಡರೊಬ್ಬರು ಹೇಳಿದರು.
‘ಮೂರು ನಾಲ್ಕು ದಿನಗಳಿಂದ ಕಾಯುತ್ತಿದ್ದೇವೆ. ಇಂದು ಕಳಿಸುತ್ತೇವೆ, ನಾಳೆ ಕಳಿಸುತ್ತೇವೆ ಎಂದು ಹೇಳುತ್ತಾರೆ. ಜಾರ್ಖಂಡ್ಗೆ ಕಳುಹಿಸಲು ಸಾಧ್ಯವಾಗದಿದ್ದರೂ ಪಕ್ಕದ ಯಾವುದೇ ರಾಜ್ಯಕ್ಕಾದರೂ ಕಳಿಸಿ, ನಾವು ಅಲ್ಲಿಂದ ನಮ್ಮ ರಾಜ್ಯಕ್ಕೆ ಹೋಗುತ್ತೇವೆ ಎಂದು ಮನವಿ ಮಾಡಿದರೂ, ಪೊಲೀಸರು ಬಿಡುತ್ತಿಲ್ಲ’ ಎಂದು ಕಾರ್ಮಿಕರೊಬ್ಬರು ದೂರಿದರು.
ನಗರದ ಬಿಐಇಸಿ, ಎಲೆಕ್ಟ್ರಾನಿಕ್ ಸಿಟಿ, ವೈಟ್ಫೀಲ್ಡ್ ಮತ್ತಿತರ ಕಡೆಗಳಲ್ಲಿ ವಲಸೆ ಕಾರ್ಮಿಕರನ್ನು ಇಡಲಾಗಿದೆ. ಒಂದೊಂದು ಭಾಗದಿಂದ 200ರಿಂದ 300 ಕಾರ್ಮಿಕರನ್ನು ಆಯ್ಕೆ ಮಾಡಿ, ಅವರವರ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ.
‘ಚಿಕ್ಕಬಾಣಾವರ ರೈಲು ನಿಲ್ದಾಣದೊಳಗೆ ಇವತ್ತು ಒಂದೇ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಬಿಟ್ಟಿದ್ದೇವೆ. ಜಾರ್ಖಂಡ್ನ ಈ 31 ಕಾರ್ಮಿಕರನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುತ್ತೇವೆಯೇ’ ಎಂದು ಮಾದನಾಯಕನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಕೆ.ಪಿ. ಸತ್ಯನಾರಾಯಣ ಪ್ರಶ್ನಿಸಿದರು.
‘ಹಂತ–ಹಂತವಾಗಿ ಕಾರ್ಮಿಕರನ್ನು ಕಳುಹಿಸುತ್ತಿದ್ದೇವೆ. ಜಾರ್ಖಂಡ್ನ ಈ ಕಾರ್ಮಿಕರಿಗೂ ಇವತ್ತು ಒಂದು ದಿನ ಕಾಯಿರಿ. ನಾಳೆ ಕಳುಹಿಸಿಕೊಡುತ್ತೇವೆ ಎಂದು ಮನವಿ ಮಾಡಿದರೂ ಕೇಳಲಿಲ್ಲ. ಗಲಾಟೆ ಮಾಡಿದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.