ಬೆಂಗಳೂರು: ನಗರದ ಕೆಂಪೇಗೌಡ ವೈದ್ಯಕೀಯ ವಿಜ್ಞಾನ (ಕಿಮ್ಸ್) ಸಂಸ್ಥೆಯ ವೈದ್ಯರಿಗೆ ಕಳಪೆ ಗುಣಮಟ್ಟದ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಮತ್ತು ಎನ್ 95 ಮಾಸ್ಕ್ ವಿತರಿಸಿರುವ ಆರೋಪದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಈಗಾಗಲೇ ತನಿಖೆಗೆ ಆದೇಶಿಸಿದ್ದೇನೆ’ ಎಂದಿದ್ದಾರೆ.
‘ಆರೋಪ ಸಾಬೀತಾದರೆ ಅದಕ್ಕೆ ಆಡಳಿತ ಮಂಡಳಿಯೇ ಹೊಣೆಯಾಗಬೇಕಾಗುತ್ತದೆ’ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
‘ಕೋವಿಡ್ ವಿರುದ್ಧ ನಮ್ಮ ವೈದ್ಯರು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಯೋಧರು. ಅವರ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ’ ಎಂದು ಸುಧಾಕರ್ ಹೇಳಿದ್ದಾರೆ.
‘ನಮ್ಮ ಸುರಕ್ಷತೆಯ ಜೊತೆಗೆ ಇನ್ನೊಬ್ಬರ ಸುರಕ್ಷತೆಗೆ ಅಪಾಯ ಬೇಡ ಎನ್ನುವ ಎಚ್ಚರ ಎಲ್ಲರಲ್ಲೂ ಮೂಡಲಿ. ಬಳಸಿ ತ್ಯಜಿಸುವ ಮಾಸ್ಕ್ಗಳನ್ನು ಕಾಗದದಲ್ಲಿ ಸುತ್ತಿ ಕೆಂಪು ಶಾಯಿಯಲ್ಲಿ ಗುರುತು ಹಾಕಿ ತ್ಯಾಜ್ಯ ಸಂಗ್ರಹಿಸುವವರಿಗೆ ನೀಡೋಣ. ಜವಾಬ್ದಾರಿಯುತ ನಾಗರಿಕರಾಗೋಣ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.