ಯಲಹಂಕ: ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಕುವೆಂಪುನಗರ ವಾರ್ಡ್ ವ್ಯಾಪ್ತಿಯ ಸಿಂಗಾಪುರ ಕೆರೆ ಆವರಣದಲ್ಲಿ ಆಯೋಜಿಸಿದ್ದ ವನಮಹೋತ್ಸವದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕೆರೆಯ ಪರಿವೀಕ್ಷಣೆ ನಡೆಸಿದ ಅವರು, ನಡಿಗೆ ಪಥದ ಒಂದು ಭಾಗದಲ್ಲಿ ಜಾಗ ಬಿಟ್ಟಿರುವುದರಿಂದ ಸಾರ್ವಜನಿಕರು ಕೆರೆಯ ಒಂದು ಸುತ್ತು ಹಾಕಲು ಸಂಪರ್ಕವಿಲ್ಲದಂತಾಗಿದೆ. ಈ ಸ್ಥಳದಲ್ಲಿ ಪೈಪ್, ಸ್ಲ್ಯಾಬ್ ಅಳವಡಿಸಿ, ಮಣ್ಣಿನಿಂದ ಮುಚ್ಚಿದರೆ ಕೆರೆಯನ್ನು ಒಂದು ಸುತ್ತು ಹಾಕಬಹುದು. ಈ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಹೇಳಿದರೂ ಕೇಳಿಲ್ಲಎಂದು ಸಚಿವರು ಬಿಬಿಎಂಪಿ ಕೆರೆ ವಿಭಾಗದ ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಸೈಕಲ್ಗೆ ಕೆರೆಯ ಆವರಣದಲ್ಲಿ ಪ್ರತ್ಯೇಕ ಮಾರ್ಗ ನಿರ್ಮಿಸಬೇಕು. ಜಾಲಿಮರಗಳನ್ನು
ತೆರವುಗೊಳಿಸಿ, ಜಾಗವನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಬೇಕು. ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಮಾಜಿ ಸದಸ್ಯ ವಿ.ವಿ.ಪಾರ್ತಿಬರಾಜನ್ ಮಾತನಾಡಿ, ‘ಒಟ್ಟು 65 ಎಕರೆ ವಿಸ್ತೀರ್ಣದ ಕೆರೆಯ ಒಂದು ಭಾಗದಲ್ಲಿ ನಡಿಗೆ ಪಥ, ಸಸಿಗಳನ್ನು ನೆಡುವುದು ಸೇರಿ ₹ 4.50 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಕೆರೆಯ ಅಂಗಳದಲ್ಲಿ 500 ಗಿಡಗಳನ್ನು ನೆಡಲಾಗಿದ್ದು, ಮತ್ತೊಂದು ಭಾಗದಲ್ಲಿ ಮಕ್ಕಳ ಆಟಿಕೆಗಳು, ಹಿರಿಯ ನಾಗರಿಕರ ವಿಶ್ರಾಂತಿಗಾಗಿ ಆಸನಗಳ ಅಳವಡಿಕೆ, ಭದ್ರತಾ ಸಿಬ್ಬಂದಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು’ ಎಂದರು.
ಕಾಂಗ್ರೆಸ್ ಮುಖಂಡರಾದ ಸಂತೋಷ್ ರಾಜನ್, ಮಹಾಂತೇಶ್ವರಸ್ವಾಮಿ, ಎಂ.ಮುನಿರಾಜು, ರಾಜಣ್ಣ, ಮುನಿಯಪ್ಪ, ನಾಗಿಲ, ಪುಷ್ಟಾ, ಅನಿತ, ವಾಸಂತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.