ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾರತದ ನಾಯಕರಾಗದೆ, ಎಂತಹ ಸನ್ನಿವೇಶವನ್ನೂ ಬದಲಾಯಿಸಬಲ್ಲ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ’ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಅಯೋಧ್ಯ ಪಬ್ಲಿಕೇಷನ್ಸ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹೇಶ್ ಮಂಚಲ್ ಅವರ ಸಂಪಾದಕತ್ವದ ‘ದಿ ಮೋದಿ ಎಫೆಕ್ಟ್’ ಪುಸ್ತಕವನ್ನು ಜನಾರ್ಪಣೆ ಮಾಡಿ, ಮಾತನಾಡಿದರು.
‘ಭಾರತವು ಉತ್ಪಾದನೆ ಜತೆಗೆ ಸೇವಾ ವಲಯದಲ್ಲೂ ಜಾಗತಿಕ ನಾಯಕ ರಾಷ್ಟ್ರವಾಗಿ ಬೆಳೆದಿದೆ. ಡಿಜಿಟಿಲ್, ಐಟಿ ವಲಯದಲ್ಲಿ ಚೀನಾವನ್ನೇ ಹಿಂದಿಕ್ಕುವಷ್ಟು ಸಶಕ್ತವಾಗಿದೆ. ನವೋದ್ಯಮ, ಸೋಲಾರ್ ವಿದ್ಯುತ್ ವಲಯ, ಸೆಮಿಕಂಡಕ್ಟರ್, ರಕ್ಷಣಾ ವಲಯದ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ’ ಎಂದು ಹೇಳಿದರು.
ಕಲಾವಿದ ಪ್ರಕಾಶ್ ಬೆಳವಾಡಿ, ‘ನರೇಂದ್ರ ಮೋದಿ ಒಬ್ಬ ಅವಕಾಶವಾದಿ. ಅಂದರೆ, ಎಂತಹ ಸನ್ನಿವೇಶವನ್ನೂ ಒಳ್ಳೆಯದಕ್ಕಾಗಿ ಬಳಸಿಕೊಳ್ಳಬಲ್ಲ ಬುದ್ಧಿವಂತ ನಾಯಕ. ಒಂದು ದಶಕದ ಅವಧಿಯಲ್ಲಿ ಎಂತಹ ವಿರೋಧ ಬಂದರೂ ಭಾರತಕ್ಕೆ ಒಳ್ಳೆಯದನ್ನು ಮಾಡಲು ಎಂದಿಗೂ ಹಿಂಜರಿದಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೃದ್ರೋಗ ತಜ್ಞ ಡಾ.ದೇವಿಪ್ರಸಾದ್ ಶೆಟ್ಟಿ, ‘ಒಂದು ದಶಕದ ಅವಧಿಯಲ್ಲಿ ಭಾರತೀಯ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ವೈದ್ಯಕೀಯ ಕಾಲೇಜುಗಳು 377ರಿಂದ 780ಕ್ಕೆ ಏರಿದರೆ, ಸೀಟುಗಳ ಸಂಖ್ಯೆ 1.18 ಲಕ್ಷಕ್ಕೆ ಹೆಚ್ಚಳವಾಗಿವೆ. ನರ್ಸಿಂಗ್ ಕೋರ್ಸ್ ಮಾಡಿದವರಿಗೂ ಲಕ್ಷಾಂತರ ರೂಪಾಯಿ ವೇತನ ಸಿಗುತ್ತಿದೆ. ಆರೋಗ್ಯ ಕ್ಷೇತ್ರದ ಬದಲಾವಣೆಯ ಫಲ ಮುಂದಿನ ಪೀಳಿಗೆಗೂ ಸಿಗಲಿದೆ’ ಎಂದು ಹೇಳಿದರು.
ಚೈತನ್ಯಾ ಆದಿಕೇಶವುಲು, ರೋಹಿತ್ ಚಕ್ರತೀರ್ಥ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.