ಬೆಂಗಳೂರು: ಎಟಿಎಂ ಯಂತ್ರಕ್ಕೆ ತುಂಬಲು ಹಣ ಕೊಂಡೊಯ್ಯುತ್ತಿದ್ದ ವಾಹನದ ಚಾಲಕ ₹ 99 ಲಕ್ಷ ಸಹಿತ ಪರಾರಿಯಾಗಿದ್ದಾನೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದ ಪವನ್ (23) ಪರಾರಿಯಾದ ವ್ಯಕ್ತಿ. ಹಣ ಸಾಗಿಸುವ ಸಂಸ್ಥೆಯ ವಾಹನದ ಚಾಲಕನಾಗಿ ಪವನ್ ವಾರದ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದ’ ಎಂದು ಪೊಲೀಸರು ತಿಳಿಸಿದರು.
‘ಮೂರು ಮಂದಿ ಹಣ ತುಂಬಿಸುವವರ (ಕಸ್ಟೋಡಿಯನ್ಗಳು) ಜೊತೆ ಶುಕ್ರವಾರ ಸಂಜೆ ಕಮ್ಮನಹಳ್ಳಿಯಲ್ಲಿರುವ ಐಸಿಐಸಿಐ ಬ್ಯಾಂಕಿನ ಎಟಿಎಂ ಘಟಕಕ್ಕೆ ಹಣ ತುಂಬಲು ವಾಹನ ಚಲಾಯಿಸಿಕೊಂಡು ಪವನ್ ಹೋಗಿದ್ದ. ಸಿಬ್ಬಂದಿ ಹಣ ತುಂಬಲು ತೆರಳಿದ ವೇಳೆ ವಾಹನ ಸಹಿತ ಪವನ್ ಪರಾರಿಯಾಗಿದ್ದಾನೆ. ಇಬ್ಬರು ಗನ್ಮನ್ಗಳು ಅವನನ್ನು ಹಿಂಬಾಲಿಸಿದರೂ ಪ್ರಯೋಜನವಾಗಲಿಲ್ಲ. ಲಿಂಗಾರಾಜಪುರ ಫ್ಲೈಓವರ್ ಮೇಲೆ ವಾಹನ ಬಿಟ್ಟು ಪವನ್ ತಲೆಮರೆಸಿಕೊಂಡಿದ್ದಾನೆ’ ಎಂದೂ ಪೊಲೀಸರು ಹೇಳಿದರು.
‘ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು’ ಎಂದು ಡಿಸಿಪಿ (ಪೂರ್ವ) ರಾಹುಲ್ ಕುಮಾರ್ ಶಹಪೂರವಾಡ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.