ADVERTISEMENT

ಹಿಂಬಾಲಿಸಿ ಲೈಂಗಿಕ ದೌರ್ಜನ್ಯ: ತಾಯಿ– ಮಕ್ಕಳಿಗೆ ಠಾಣೆಯಲ್ಲಿ ಆಶ್ರಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 19:45 IST
Last Updated 11 ಡಿಸೆಂಬರ್ 2021, 19:45 IST
   

ಬೆಂಗಳೂರು: ಸಂಬಂಧಿಕರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ತಮ್ಮ ಮನೆಯತ್ತ ಕಾರಿನಲ್ಲಿ ಹೊರಟಿದ್ದ ಮಹಿಳೆಯೊಬ್ಬರ ಮೇಲೆ ಅಪರಿಚಿತನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದ ನಿವಾಸಿಯಾಗಿರುವ ಮಹಿಳೆ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಅಪರಿಚಿತ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪತ್ತೆಗಾಗಿ ಘಟನಾ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಆಗಿದ್ದೇನು: ‘ದೂರುದಾರ ಮಹಿಳೆ, ತಮ್ಮ ಮಕ್ಕಳಿಬ್ಬರ ಜೊತೆ ಹೊಸಕೋಟೆಯಲ್ಲಿರುವ ಸಂಬಂಧಿಕರ ಮನೆಗೆ ಶನಿವಾರ ಬೆಳಿಗ್ಗೆ ಕಾರಿನಲ್ಲಿ ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಬೆಂಗಳೂರಿಗೆ ಮರಳುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಹೆಬ್ಬಾಳ ವೃತ್ತದ ಬಳಿ ಕಾರು ಪಂಕ್ಚರ್ ಆಗಿತ್ತು. ಮಹಿಳೆ, ಚಕ್ರ ಬದಲಿಸುತ್ತಿದ್ದರು. ಅದೇ ಸಂದರ್ಭದಲ್ಲೇ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ಅಪರಿಚಿತನೊಬ್ಬ ಮಹಿಳೆಯನ್ನು ಮಾತನಾಡಿಸಿದ್ದ. ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.’

‘ಚಕ್ರ ಬದಲಿಸಿದ್ದ ಮಹಿಳೆ, ತಮ್ಮ ಕಾರು ಏರಿ ಸ್ಥಳದಿಂದ ಹೊರಟಿದ್ದರು. ಹೊರ ವರ್ತುಲ ರಸ್ತೆ ಮೂಲಕ ಗೋರಗುಂಟೆಪಾಳ್ಯ ವೃತ್ತಕ್ಕೆ ಬಂದಿದ್ದರು. ಆರೋಪಿ ಅವರ ಕಾರು ಹಿಂಬಾಲಿಸಿಕೊಂಡು ಬಂದಿದ್ದ. ಗೊರಗುಂಟೆಪಾಳ್ಯದ ಬಳಿಯೂ ಕಾರು ಅಡ್ಡಗಟ್ಟಲು ಯತ್ನಿಸಿದ್ದ. ಹೆದರಿದ ಮಹಿಳೆ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಹಾಯ ಕೋರಿದ್ದರು. ಕೆಲ ನಿಮಿಷಗಳಲ್ಲೇ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಪೊಲೀಸರನ್ನು ನೋಡಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದೂ ಮೂಲಗಳು ಮಾಹಿತಿ ನೀಡಿವೆ.

‘ತಡರಾತ್ರಿಯಾಗಿದ್ದರಿಂದ ಮಹಿಳೆ ಹಾಗೂ ಅವರ ಮಕ್ಕಳನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಆರ್‌ಎಂಸಿ ಯಾರ್ಡ್ ಠಾಣೆಗೆ ಕರೆದೊಯ್ದಿದ್ದರು. ನಸುಕಿನವರೆಗೂ ತಾಯಿ–ಮಕ್ಕಳಿಗೆ ಆಶ್ರಯ ನೀಡಿದ್ದರು. ಮರುದಿನ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ನಡೆದ ಸ್ಥಳದ ಆಧಾರದಲ್ಲಿ ಅಮೃತಹಳ್ಳಿ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.