ಬೆಂಗಳೂರು: ‘ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಇರಿಸಿದ್ದ ಠೇವಣಿ ಕಳೆದುಕೊಂಡು ಸಂತ್ರಸ್ತರಾಗಿರುವವರ ಮೇಲೆ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಬೆಂಬಲಿಗರು ದೌರ್ಜನ್ಯ ನಡೆಸಿದ್ದಾರೆ’ ಎಂದು ವಿಧಾನ ಪರಿಷತ್ನ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಶಂಕರ್ ಗುಹಾ ದ್ವಾರಕನಾಥ್ ಅವರೊಂದಿಗೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಅವರು ಇತ್ತೀಚೆಗೆ ಸಹಕಾರಿ ಚಿಂತನ– ಮಂಥನ ಸಭೆ ಆಯೋಜಿಸಿದ್ದರು. ಅಲ್ಲಿಗೆ ತೆರಳಿದ್ದ ಎರಡೂ ಬ್ಯಾಂಕ್ಗಳ ಸಂತ್ರಸ್ತ ಠೇವಣಿದಾರರನ್ನು ಗೂಂಡಾಗಳು ಎಂದು ಅವಮಾನಿಸಿ, ದೌರ್ಜನ್ಯ ನಡೆಸಲಾಗಿದೆ’ ಎಂದು ದೂರಿದರು.
‘ಈ ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿದ್ದ ಜನರ ಬದುಕು ಬೀದಿಗೆ ಬಂದಿದೆ. ಸಂಸದರಾಗಿ ನ್ಯಾಯ ದೊರಕಿಸಿಕೊಡಬೇಕಿದ್ದ ತೇಜಸ್ವಿ, ಯಾವುದೇ ಕೆಲಸ ಮಾಡಿಲ್ಲ. ಕೇಂದ್ರ ಸರ್ಕಾರವೂ ಠೇವಣಿದಾರರ ಹಿತ ರಕ್ಷಿಸುವ ಬದ್ಧತೆ ತೋರಿಲ್ಲ. ಮಸಾಲೆ ದೋಸೆ ತಿನ್ನುವುದು, ಲಸಿಕೆ ಮಾರುವುದಷ್ಟೇ ತೇಜಸ್ವಿ ಅವರ ಕೆಲಸ’ ಎಂದು ವಾಗ್ದಾಳಿ ನಡೆಸಿದರು.
‘ಚಿಕ್ಕಪ್ಪ, ಮಗನಿಂದ ಅನ್ಯಾಯ’: ‘ಗುರು ರಾಘವೇಂದ್ರ ಮತ್ತು ವಶಿಷ್ಠ ಸಹಕಾರಿ ಬ್ಯಾಂಕ್ಗಳ ಕಾರ್ಯಕ್ರಮಗಳಲ್ಲಿ ತೇಜಸ್ವಿ ಸೂರ್ಯ ಮತ್ತು ಅವರ ಚಿಕ್ಕಪ್ಪ ರವಿ ಸುಬ್ರಮಣ್ಯ ಮದುಮಕ್ಕಳಂತೆ ಓಡಾಡುತ್ತಿದ್ದರು. ಬ್ಯಾಂಕ್ಗಳು ಮುಳುಗಿದ ಬಳಿಕ ಠೇವಣಿದಾರರಿಗೆ ಸುಳ್ಳು ಭರವಸೆ ನೀಡಿ ಅನ್ಯಾಯ ಮಾಡಿದ್ದಾರೆ’ ಎಂದು ಶಂಕರ್ ಗುಹಾ ದ್ವಾರಕಾನಾಥ್ ಆರೋಪಿಸಿದರು.
‘ಬಿಜೆಪಿ ಸರ್ಕಾರ ಇದ್ದಾಗ ಈ ಬ್ಯಾಂಕ್ಗಳಲ್ಲಿ ಹಗರಣ ನಡೆಯಿತು. ಕೇಂದ್ರದಲ್ಲಿ ಕೂಡ ಬಿಜೆಪಿ ಸರ್ಕಾರ ಇತ್ತು. ನ್ಯಾಯ ಕೇಳಿ ಬಂದವರ ಮೇಲೆ ಹಲ್ಲೆ ಮಾಡಿ, ಅವರನ್ನೇ ಗೂಂಡಾಗಳು ಎಂದು ಕರೆದಿದ್ದಾರೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.